ADVERTISEMENT

ಬಗ್ಗಾಗೆ ಮತ್ತೆ ಬಂಧನದ ಭೀತಿ: ಮೊಹಾಲಿ ಕೋರ್ಟ್‌ನಿಂದ ವಾರಂಟ್‌ ಜಾರಿ

ಪಿಟಿಐ
Published 7 ಮೇ 2022, 13:13 IST
Last Updated 7 ಮೇ 2022, 13:13 IST
ತಜಿಂದರ್‌ ಬಗ್ಗ
ತಜಿಂದರ್‌ ಬಗ್ಗ    

ಚಂಡೀಗಢ: ಪಂಜಾಬ್ ಪೊಲೀಸರಿಂದ ಬಂಧನಕ್ಕೀಡಾಗಿ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಿದ್ದ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರಿಗೆ ಮತ್ತೆ ಬಂಧನ ಭೀತಿ ಎದುರಾಗಿದೆ. ಕಳೆದ ತಿಂಗಳು ದಾಖಲಾದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೊಹಾಲಿ ಕೋರ್ಟ್‌ ಅವರ ವಿರುದ್ಧ ಬಂಧನ ವಾರಂಟ್‌ ಜಾರಿ ಮಾಡಿದೆ.

ಮ್ಯಾಜಿಸ್ಟ್ರೇಟ್ ರಾವ್ತೇಶ್ ಇಂದರ್‌ಜಿತ್ ಸಿಂಗ್ ಅವರು ಶನಿವಾರ ಬಂಧನ ವಾರಂಟ್ ಹೊರಡಿಸಿದ್ದಾರೆ.

"ತಜಿಂದರ್ ಪಾಲ್ ಸಿಂಗ್ ಬಗ್ಗಾ ಐಪಿಸಿ ಸೆಕ್ಷನ್‌ 153-A, 505, 505 (2), 506 ಅಡಿಯಲ್ಲಿ ಶಿಕ್ಷಾರ್ಹ ಅಪರಾಧದ ಆರೋಪ ಎದುರಿಸುತ್ತಿದ್ದಾರೆ. ಅವರನ್ನು ಬಂಧಿಸಿ, ನನ್ನ ಮುಂದೆ ಹಾಜರುಪಡಿಸಲು ಈ ಮೂಲಕ ಆದೇಶಿಸುತ್ತಿದ್ದೇನೆ’ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 23ಕ್ಕೆ ನಿಗದಿ ಮಾಡಲಾಗಿದೆ.

ಪ್ರಚೋದನಕಾರಿ ಹೇಳಿಕೆ ನೀಡಿದ, ದ್ವೇಷ ಭಾವನೆ ಕೆರಳಿಸಿದ ಮತ್ತು ಬೆದರಿಕೆಯೊಡ್ಡಿದ ಆರೋಪದ ಮೇಲೆ ಪಂಜಾಬ್ ಪೊಲೀಸರು ತಜೀಂದರ್ ಬಗ್ಗಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಮೊಹಾಲಿ ನಿವಾಸಿ, ಎಎಪಿ ನಾಯಕ ಸನ್ನಿ ಅಹ್ಲುವಾಲಿಯಾ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿತ್ತು.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಮಾರ್ಚ್ 30 ರಂದು ಬಿಜೆಪಿ ಯುವ ಘಟಕ ನಡೆಸಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಗ್ಗಾ ಅವರು ನೀಡಿದ್ದ ಹೇಳಿಕೆಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.