ನವದೆಹಲಿ: ಜನವರಿ 26 ಗಣರಾಜ್ಯೋತ್ಸವದ ದಿನದಂದು ವೇಷ ಮರೆಸಿ ಬಂದಿರುವ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಷ್ಟ್ರ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯ ಎಸಗಿದ್ದಾರೆಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ವಕ್ತಾರ ರಾಕೇಶ್ ಟಿಕಾಯತ್ ಗಂಭೀರ ಆರೋಪ ಮಾಡಿದ್ದಾರೆ.
ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವ ದಿನದಂದು ನಡೆಸಿದ್ದ ಟ್ರ್ಯಾಕ್ಟರ್ ಪೆರೇಡ್ನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಘಟನೆಯಲ್ಲಿ 400ರಷ್ಟು ಪೊಲೀಸರು ಗಾಯಗೊಂಡಿದ್ದರೆ ಟ್ರ್ಯಾಕ್ಟರ್ ಮಗುಚಿ ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದರು.
ಸುಮಾರು 400 ಜನರೊಂದಿಗೆ ಬಂದ ಬಿಜೆಪಿಯ ಇಬ್ಬರು ಶಾಸಕರು ರೈತರ ಹೋರಾಟದ ಚಿತ್ರಣವನ್ನು ಕೆಡಿಸಿದರು. ಸಿಖ್ ಜನರನ್ನು ದೇಶದ್ರೋಹಿಗಳು ಎಂದು ಬಿಂಬಿಸುವುದು ಅವರ ಗುರಿಯಾಗಿತ್ತು. ಈ ಘಟನೆಯ ಬಳಿಕ ಉತ್ತರ ಪ್ರದೇಶ ಸರ್ಕಾರದ ಮೇಲೆ ನಮಗೆ ನಂಬಿಕೆಯಿಲ್ಲ ಎಂದು ಆರೋಪಿಸಿದರು.
ಗಡಿಯಲ್ಲಿ ವಿದ್ಯುತ್ ಹಾಗೂ ನೀರು ಸರಬರಾಜನ್ನು ಕಡಿತಗೊಳಿಸಿದ ಉತ್ತರ ಪ್ರದೇಶದ ಸರ್ಕಾರದ ವಿರುದ್ದವೂ ರಾಕೇಶ್ ಟಿಕಾಯತ್ ವಾಗ್ದಾಳಿ ನಡೆಸಿದರು.
ಶುಕ್ರವಾರದಂದು ರೈತರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟಿರುವ ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ, ನೀರು ಹಾಗೂ ಶೌಚಾಲಯದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಪ್ರತಿಭಟನೆ ಸ್ಥಳ ಬಿಟ್ಟು ಕದಲುವುದಿಲ್ಲ.
ರೈತರು ಪ್ರತಿಭಟನಾ ನಿರತ ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎಂದು ರಾಕೇಶ್ ಟಿಕಾಯತ್ ಪುನರುಚ್ಛರಿಸಿದರು. ನಾವು ನಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಮಾತನಾಡುತ್ತೇವೆ. ರೈತರಲ್ಲಿ ಸಂಯಮದಿಂದ ಇರಲು ಕೋರುತ್ತೇವೆ. ಸರ್ಕಾರದೊಂದಿಗೆ ನಮ್ಮ ಮಾತುಕತೆ ಮುಂದುವರಿಯಲಿದೆ ಎಂದು ಹೇಳಿದರು.
ಗುರುವಾರ ರಾತ್ರಿ ವೇಳೆಗೆ ಸ್ಥಳ ಖಾಲಿ ಮಾಡುವಂತೆ ಪ್ರತಿಭಟನಾಕಾರರಿಗೆ ಗಾಜಿಯಾಬಾದ್ ಜಿಲ್ಲಾಡಳಿತ ಆದೇಶಿಸಿತ್ತು. ಆದೇಶ ಪಾಲಿಸದಿದ್ದರೆ ಬಲವಂತವಾಗಿ ಸ್ಥಳಾಂತರ ಮಾಡುವುದಾಗಿ ತಿಳಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.