ಲಖನೌ: ‘ಬಿಜೆಪಿ ಸಂಸದ ಕೌಶಲ್ ಕಿಶೋರ್ ಅವರ ಪುತ್ರನ ಮೇಲೆ ಬುಧವಾರ ಬೆಳಿಗ್ಗೆ ಗುಂಡಿನ ದಾಳಿ ನಡೆದಿದ್ದು, ಆತನ ಸೋದರ ಮಾವ ಈ ದಾಳಿ ನಡೆಸಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
‘ಲಖನೌನ ಮಡಿಯಾನ್ ಪ್ರದೇಶದಲ್ಲಿಮೋಹನ್ಲಾಲ್ಗಂಜ್ ಕ್ಷೇತ್ರದ ಬಿಜೆಪಿ ಸಂಸದನ ಮಗ ಆಯುಷ್(30) ಮೇಲೆ ಬುಧವಾರ ಮುಂಜಾನೆ 2 ಗಂಟೆಗೆ ಗುಂಡು ಹಾರಿಸಲಾಗಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಆಯುಷ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು’ ಎಂದು ಅವರು ತಿಳಿಸಿದರು.
‘ಈ ದಾಳಿಯನ್ನು ಆಯುಷ್ ಅವರ ಸೋದರ ಮಾವ ನಡೆಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ದಾಳಿಯ ಬಗ್ಗೆ ಯಾರೊಬ್ಬರೂ ದೂರು ದಾಖಲಿಸಿಲ್ಲ. ಆದರೆ ನಮಗೆ ದಾಳಿಯಲ್ಲಿ ಬಳಸಲಾದ ಶಸ್ತ್ರಾಸ್ತ ಸಿಕ್ಕಿದೆ’ ಎಂದು ಲಖನೌನ ಪೊಲೀಸ್ ಆಯುಕ್ತ ಡಿ.ಕೆ ಠಾಕೂರ್ ಅವರು ಮಾಹಿತಿ ನೀಡಿದರು.
ಈ ದಾಳಿಯನ್ನು ತಾನೇ ನಡೆಸಿರುವುದಾಗಿ ಆಯುಷ್ ಸೋದರ ಮಾವ ಆದರ್ಶ್ ಅವರು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಕಿಶೋರ್,‘ ಆಯುಷ್ ಆಸ್ಪತ್ರೆಯಲ್ಲಿ ಇರುವಾಗ ಯಾರೊಬ್ಬರ ಹೆಸರನ್ನು ಪ್ರಸ್ತಾಪಿಸಿಲ್ಲ. ತಾನು ಸೋದರ ಮಾವನ ಜತಗೆ ಹೊರ ಹೋಗಿದ್ದೆ ಎಂದು ಮಾತ್ರ ಹೇಳಿದ್ದ. ಆಯುಷ್ ಮತ್ತು ಆದರ್ಶ್ ಅವರು ಏನೋ ಹೇಳುತ್ತಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ನನಗೆ ಇದರ ಬಗ್ಗೆ ಏನೂ ಗೊತ್ತಿಲ್ಲ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.