ಕೋಲ್ಕತ್ತ: ಬಿಜೆಪಿ ಸಂಸದ ಸೌಮಿತ್ರ ಖಾನ್ ಅವರ ಪತ್ನಿ ಸುಜಾತ ಮೊಂಡಲ್ ಖಾನ್ ಅವರು ಸೋಮವಾರ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
‘2019 ರ ಲೋಕಸಭಾ ಚುನಾವಣೆಯಲ್ಲಿ ಪತಿಗೆ ವಿಜಯ ಸಿಗುವಂತೆ ಮಾಡಲು ನಾನು ಶ್ರಮ ವಹಿಸಿದೆ. ಆದರೆ ಬಿಜೆಪಿಯಲ್ಲಿ ನನಗೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ’ ಎಂದು ಸುಜಾತ್ ಖಾನ್ ಅವರು ದೂರಿದ್ದಾರೆ.
‘ಬಿಜೆಪಿಯಲ್ಲಿ ನಿಷ್ಠಾವಂತರಿಗಿಂತ ಹೊಸದಾಗಿ ಸೇರ್ಪಡೆಯಾದವರಿಗೆ ಮತ್ತು ಭ್ರಷ್ಟ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
ಟಿಎಂಸಿ ಸಂಸದ ಸೌಗತ್ ರಾಯ್ ಮತ್ತು ಟಿಎಂಸಿ ವಕ್ತಾರ ಕುನಾಲ್ ಘೋಷ್ ಅವರ ಉಪಸ್ಥಿತಿಯಲ್ಲಿ ಸುಜಾತ ಮೊಂಡಲ್ ಅವರು ಸೋಮವಾರ ಟಿಎಂಸಿ ಪಕ್ಷಗೆ ಸೇರ್ಪಡೆಯಾದರು. ಈ ಬಳಿಕ ಮಾತನಾಡಿದ ಅವರು, ‘ದಾಳಿ ನಡೆದರೂ ಸಹಿಸಿಕೊಂಡು, ಚುನಾವಣೆಯಲ್ಲಿ ಪತಿಗೆ ಗೆಲುವನ್ನು ಒದಗಿಸಲು ಬಹಳ ತ್ಯಾಗಗಳನ್ನು ಮಾಡಿದ್ದೇನೆ. ಆದರೂ ನನಗೆ ಪ್ರತಿಫಲ ದೊರಕಲಿಲ್ಲ. ಹಾಗಾಗಿ ಮಮತಾ ಬ್ಯಾನರ್ಜಿ ಮತ್ತು ಅಣ್ಣ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಕೆಲಸ ಮಾಡಲು ನಾನು ಬಯಸುತ್ತೇನೆ’ ಎಂದಿದ್ದಾರೆ.
‘ಸೌಮಿತ್ರ ಖಾನ್ ಅವರು ತಮ್ಮ ಭವಿಷ್ಯವನ್ನು ಸ್ವಯಂ ನಿರ್ಧರಿಸಲಿ. ಒಂದಲ್ಲ ಒಂದು ದಿನ ಅವರಿಗೆ ಈ ಬಗ್ಗೆ ಅರಿವು ಮೂಡಲಿದೆ. ಆಗ ಅವರು ಟಿಎಂಸಿಗೆ ಬರಲಿದ್ದಾರೆ’ ಎಂದು ಸುಜಾತ್ ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.