ಮುಂಬೈ: ಕೇಂದ್ರ ಸಚಿವ ಸಂಪುಟದಲ್ಲಿ ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡಲು ‘ಮಾನವ ಸಂಪನ್ಮೂಲ’ ಒದಗಿಸಿದ್ದಕ್ಕೆ ಬಿಜೆಪಿಯು ಶಿವಸೇನಾಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು ಎಂದು ಸಂಸದ ಸಂಜಯ್ ರಾವುತ್ ಲೇವಡಿ ಮಾಡಿದ್ದಾರೆ.
ಕೇಂದ್ರದಲ್ಲಿ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವರಾಗಿರುವ ಕಪೀಲ್ ಪಾಟೀಲ್ ಮತ್ತು ಆರೋಗ್ಯ ಖಾತೆ ರಾಜ್ಯ ಸಚಿವರಾಗಿರುವ ಭಾರತಿ ಪವಾರ್ ಅವರು ಎನ್ಸಿಪಿ ಜತೆಗಿದ್ದರು. ಎಂಎಸ್ಎಂಇ ಖಾತೆ ಹೊಂದಿರುವ ಸಚಿವ ನಾರಾಯಣ ರಾಣೆ ಅವರು ಈ ಮೊದಲು ಶಿವಸೇನಾ ಮತ್ತು ಕಾಂಗ್ರೆಸ್ ಜತೆಗಿದ್ದವರು. ಮಹಾರಾಷ್ಟ್ರದ ನಾಲ್ವರು ಸಚಿವರಲ್ಲಿ ಮೂವರು ಬಿಜೆಪಿ ಮೂಲದವರಲ್ಲ.
‘ಮಹಾರಾಷ್ಟ್ರದ ಎಲ್ಲ ನಾಲ್ವರು ಸಚಿವರಿಗೆ ಉತ್ತಮ ಖಾತೆಗಳನ್ನು ನೀಡಲಾಗಿದೆ. ಜನರ ಸೇವೆ ಮಾಡಲು ಉತ್ತಮ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.
‘ಆದರೆ, ಖಾತೆಯನ್ನು ಹೋಲಿಸಿದಾಗ ನಾರಾಯಣ ರಾಣೆ ಅವರ ಸ್ಥಾನಮಾನ ದೊಡ್ಡದು. ಈ ಹಿಂದೆ ಅವರು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜತೆಗೆ, ಮಹತ್ವದ ಖಾತೆಗಳನ್ನು ಸಹ ನಿಭಾಯಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.