ADVERTISEMENT

PM Vishwakarma scheme: ಪಿಎಂ ವಿಶ್ವಕರ್ಮ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಐಎಎನ್ಎಸ್
Published 16 ಆಗಸ್ಟ್ 2023, 14:36 IST
Last Updated 16 ಆಗಸ್ಟ್ 2023, 14:36 IST
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌
ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌   ಪಿಟಿಐ ಚಿತ್ರ

ನವದೆಹಲಿ: ಸ್ವಾತಂತ್ರ್ಯೋತ್ಸವ ದಿನ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿರುವ ₹ 13 ಸಾವಿರ ಕೋಟಿ ಮೊತ್ತದ ಪಿಎಂ ವಿಶ್ವಕರ್ಮ ಯೋಜನೆಯನ್ನು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದಿಸಿದೆ.

18 ಬಗೆಯ ಸಾಂಪ್ರದಾಯಿಕ ವ್ಯಹಾರಗಳಲ್ಲಿ ತೊಡಗಿಕೊಂಡಿರುವ ಕುಶಲಕರ್ಮಿಗಳಾದ ಮರ, ಕಬ್ಬಿಣ ಹಾಗೂ ಚರ್ಮದ ಕೆಲಸ ಮಾಡುವವರು, ಮೀನುಗಾರರು ಹಾಗೂ ಇತರರು ಈ ಯೋಜನೆಯ ಅಡಿಯಲ್ಲಿ ಪಿಎಂ ವಿಶ್ವಕರ್ಮ ಪ್ರಮಾಣಪತ್ರದೊಂದಿಗೆ ಮಾನ್ಯತೆ ಮತ್ತು ಗುರುತಿನ ಪತ್ರ ಪಡೆದುಕೊಳ್ಳಲಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ರೈಲ್ವೆ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್‌ ಅವರು, ಕುಶಲಕರ್ಮಿಗಳು ಈ ಯೋಜನೆ ಅಡಿಯಲ್ಲಿ ಪಡೆಯುವ ಹೊಸ ಉಪಕರಣಗಳ ಮೂಲಕ ನೈಪುಣ್ಯ ಸಾಧಿಸಲಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ತರಬೇತಿ, ಸುಧಾರಿತ ಉಪಕರಣಗಳು, ಡಿಜಿಟಲ್‌ ಪಾವತಿ ವ್ಯವಸ್ಥೆ ಮತ್ತು ಮಾರುಕಟ್ಟೆ ಬೆಂಬಲ ಲಭ್ಯವಾಗಲಿದೆ. ಕುಶಲಕರ್ಮಿಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಆಗಸ್ಟ್‌ 15ರಂದು (ಮಂಗಳವಾರ) ಸ್ವಾತಂತ್ರ್ಯೋತ್ಸವ ಭಾಷಣದ ವೇಳೆ ವಿಶ್ವಕರ್ಮ ಯೋಜನೆ ಘೋಷಿಸಿದ್ದ ಪ್ರಧಾನಿ ಮೋದಿ, ಹಿಂದುಳಿದ ವರ್ಗಕ್ಕೆ ಸೇರಿದ ಕುಶಲಕರ್ಮಿಗಳಿಗೆ ಲಾಭವಾಗುವ ಈ ಯೋಜನೆಗೆ ಮುಂಬರುವ ವಿಶ್ವಕರ್ಮ ಜಯಂತಿಯಂದು ಚಾಲನೆ ನೀಡಲಾಗುವುದು ಎಂದು ಹೇಳಿದ್ದರು.

ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಈ ವರ್ಷಾಂತ್ಯದಲ್ಲಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಹಿಂದುಳಿದ ಸಮುದಾಯದವರನ್ನು ಸೆಳೆಯುವ ಸಲುವಾಗಿ ಕೇಂದ್ರ ಸರ್ಕಾರ ಈ ಯೋಜನೆ ಘೋಷಿಸಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.