ADVERTISEMENT

ಭಗವದ್ಗೀತೆಯಲ್ಲೂ ಜಿಹಾದ್‌: ಶಿವರಾಜ್‌ ಪಾಟೀಲ್‌ ಹೇಳಿಕೆಗೆ ಬಿಜೆಪಿ ಆಕ್ಷೇಪ

ಕಾಂಗ್ರೆಸ್‌ನ ಶಿವರಾಜ್‌ ಪಾಟೀಲ್‌ ಹೇಳಿಕೆಗೆ ಬಿಜೆಪಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2022, 20:24 IST
Last Updated 21 ಅಕ್ಟೋಬರ್ 2022, 20:24 IST

ನವದೆಹಲಿ: ಭಗವದ್ಗೀತೆ ಗ್ರಂಥದಲ್ಲಿ ಮತ್ತು ಕ್ರೈಸ್ತ ಧರ್ಮದಲ್ಲೂ ಜಿಹಾದ್‌ ಇದೆ ಎಂದು ಲೋಕಸಭೆಯ ಮಾಜಿ ಸ್ಪೀಕರ್, ಕಾಂಗ್ರೆಸ್‌ನ ಮುಖಂಡ ಶಿವರಾಜ್ ಪಾಟೀಲ್‌ ಹೇಳಿದ್ದಾರೆ. ಈ ಹೇಳಿಕೆಯಿಂದ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕಾಂಗ್ರೆಸ್‌ನ ಮೊಹ್ಸೀನಾ ಕಿದ್ವಾಯಿ ಅವರ ಜೀವನ ಚರಿತ್ರೆಯನ್ನು ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವರಾಜ್ ಪಾಟೀಲ್‌ ಬಿಡುಗಡೆ ಮಾಡಿದ್ದರು. ಆನಂತರ ಮಾತನಾಡಿದ್ದ ಅವರು ಭಗವದ್ಗೀತೆಯಲ್ಲಿಯೂ ಜಿಹಾದ್‌ ವಿಚಾರಗಳಿವೆ ಎಂದು ಹೇಳಿದ್ದರು.

‘ಜಿಹಾದ್‌ ಕುರಾನ್‌ನಲ್ಲಿ ಮಾತ್ರವಲ್ಲ. ಬದಲಿಗೆ ಮಹಾಭಾರತದಲ್ಲೂ ಇದೆ. ಮಹಾಭಾರತದ ಭಾಗವಾದ ಗೀತೆಯಲ್ಲಿ, ಶ್ರೀಕೃಷ್ಣ ಅರ್ಜುನನಿಗೆ ಜಿಹಾದ್‌ ಬೋಧಿಸುತ್ತಾನೆ. ಇದು ಕ್ರೈಸ್ತ ಧರ್ಮದಲ್ಲಿಯೂ ಇದೆ’ ಎಂದು ಅವರು ಹೇಳಿದ್ದರು.

ADVERTISEMENT

‘ನೀವು ಎಷ್ಟೇ ವಿವರಿಸಿದರೂ, ಜನರಿಗೆ ಅರ್ಥವಾಗುವುದಿಲ್ಲ. ಅವರು ಶಸ್ತ್ರಗಳನ್ನು ಹಿಡಿದು ನಿಮ್ಮೆದುರು ಬರುತ್ತಾರೆ. ನೀವು ಓಡಲೂ ಸಾಧ್ಯವಿಲ್ಲ, ನೀವು ಮಾಡುತ್ತಿರುವುದು ಜಿಹಾದ್‌ ಎಂದು ಹೇಳುವುದಕ್ಕೂ ಸಾಧ್ಯವಿಲ್ಲ. ನೀವು ತಪ್ಪು ಮಾಡುತ್ತಿದ್ದೀರಿ ಎನ್ನಲೂ ಸಾಧ್ಯವಿಲ್ಲ. ಶಸ್ತ್ರ ಹಿಡಿದು ಹೆದರಿಸಿ ಜನರಿಗೆ ಏನನ್ನೋ ಅರ್ಥ ಮಾಡಿಸಬಹುದು ಎಂಬ ಸ್ಥಿತಿ ಇರಬಾರದು. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದ್ದರು.

ಈ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ಕಾಂಗ್ರೆಸ್‌ ಹಿಂದೂ ವಿರೋಧಿ ಎಂದು ಬಿಜೆಪಿ ನಾಯಕರು ಟೀಕಿಸಿದ್ದಾರೆ. ಇನ್ನೊಂದೆಡೆ, ಈ ಸ್ವರೂಪದ ಹೇಳಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ವಕ್ತಾರರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.