ಕಲ್ಯಾಣಿ: ಕಾಶ್ಮೀರವನ್ನು ಭಾರತದಿಂದ ವಿಭಜಿಸಿ ದೇಶವನ್ನು ಇಭ್ಬಾಗಮಾಡುವವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬೆಂಬಲ ನೀಡುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಇಲ್ಲಿನ ಬೊಂಗಾವ್ ಲೋಕಸಭಾ ಕ್ಷೇತ್ರದಲ್ಲಿ ಬುಧವಾರ ಚುನಾವಣಾ ರ್ಯಾಲಿ ನಡೆಸಿದ ಅಮಿತ್ ಶಾ, ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಅದನ್ನು ಹಾಗೇ ಕಾಪಾಡಿಕೊಳ್ಳಲು ನಮ್ಮ ಪಕ್ಷ ಹೋರಾಡಲಿದೆ.ಕೇಂದ್ರದಲ್ಲಿ ಯಾವುದೇ ಸರ್ಕಾರ ಇರಲಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದಿದ್ದಾರೆ.
ಇಂದು ನಾವು ಅಧಿಕಾರದಲ್ಲಿದ್ದೇವೆ.ಮೋದಿಯವರು ಪ್ರಧಾನಿಯಾಗಿದ್ದಾರೆ. ಮುಂದಿನ ದಿನಗಳಲ್ಲಿಯೂ ಹೀಗೆ ಇರುತ್ತದೆ.ಒಂದು ವೇಳೆ ಬಿಜೆಪಿ ಅಧಿಕಾರದಲ್ಲಿ ಇಲ್ಲದೇ ಇದ್ದರೂ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿ ಇರುವಂತೆ ನಮ್ಮ ಕಾರ್ಯಕರ್ತರು ಹೋರಾಡಲಿದ್ದಾರೆ.
ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 370ನ್ನು ನಾವು ತೆಗೆದುಹಾಕುತ್ತೇವೆ
ಬಂಗಾಳದಲ್ಲಿ ನಮಗೆ 30 ಸೀಟು ಕೊಡಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದ ನಂತರ ಆರ್ಟಿಕಲ್ 370ನ್ನು ರದ್ದು ಮಾಡುತ್ತೇವೆ ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿ ಬೇಕು ಎಂಬ ಒಮರ್ ಅಬ್ದುಲ್ಲಾ ಅವರ ಒತ್ತಾಯದ ಬಗ್ಗೆ ಮಮತಾ ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ ಅಮಿತ್ ಶಾ.
ಏತನ್ಮಧ್ಯೆ, ನುಸುಳುಕೋರರನ್ನು ಗೆದ್ದಲು ಎಂದ ಶಾ, ಅವರು ದೇಶದ ಸಂಪನ್ಮೂಲಗಳನ್ನು ತಿನ್ನುತ್ತಿದ್ದಾರೆ.ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೇರಿದರೆ ಅವರನ್ನು ದೇಶದಿಂದ ಹೊರಗೆ ಕಿತ್ತೆಸೆಯುತ್ತೇವೆ ಎಂದು ಬಿಜೆಪಿ ಅಧ್ಯಕ್ಷರು ಗುಡುಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.