ನವದೆಹಲಿ: ಬಿಜೆಪಿಯು ಕಳೆದ 15 ವರ್ಷಗಳ ಆಡಳಿತಾವಧಿಯಲ್ಲಿ ದೆಹಲಿಯನ್ನು ಕೊಳಚೆ ಪ್ರದೇಶವಾಗಿ ಬದಲಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಾಗ್ದಾಳಿ ನಡೆಸಿದ್ದಾರೆ.
ಡಿಸೆಂಬರ್ 4ರಂದು ದೆಹಲಿ ನಗರ ಪಾಲಿಕೆ (ಎಂಸಿಡಿ) ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿರುವ ಸಿಸೋಡಿಯಾ, 'ದೆಹಲಿಯಲ್ಲಿ ಸ್ವಚ್ಛತೆ ಕಾಡಾಡಿಕೊಳ್ಳುವುದು ದೆಹಲಿ ನಗರ ಪಾಲಿಕೆಯ ಮುಖ್ಯ ಜವಾಬ್ದಾರಿಯಾಗಿದೆ. ಆದರೆ, ಅದನ್ನು ನಿರ್ವಹಿಸುವಲ್ಲಿ ವಿಫಲವಾಗಿರುವ ಬಿಜೆಪಿ, ರಾಷ್ಟ್ರ ರಾಜಧಾನಿಗೆ ಮೂರು ಕಸದ ಶಿಖರಗಳನ್ನು ಕೊಡುಗೆಯಾಗಿ ನೀಡಿದೆ' ಎಂದು ದೂರಿದ್ದಾರೆ.
ಸಿಸೋಡಿಯಾ ಅವರು ಕಲ್ಕಾಜಿ, ಸಂಗಮ್ ವಿಹಾರ್ ಮತ್ತು ತುಘಲಕಾಬಾದ್ ಪ್ರದೇಶಗಳಲ್ಲಿನ 9 ವಾರ್ಡ್ಗಳಲ್ಲಿ ಬುಧವಾರ ಒಂದೇದಿನ ಮೇಲಿಂದ ಮೇಲೆ 'ಜನಸಂವಾದ' ಕಾರ್ಯಕ್ರಮಗಳನ್ನು ನಡೆಸಿದರು.
ಇದೇವೇಳೆ ಅವರು, 'ಎಂಸಿಡಿಯಲ್ಲಿಯೂ ಅರವಿಂದ ಕೇಜ್ರಿವಾಲ್ ಸರ್ಕಾರವೇ ಅಧಿಕಾರಕ್ಕೇರಲಿದ್ದು, ಕೌನ್ಸಿಲರ್ಗಳು ಸಾರ್ವಜನಿಕ ಹಿತಾಸಕ್ತಿಯಿಂದ ಕೆಲಸ ಮಾಡಲಿದ್ದಾರೆ. ವಾರ್ಡ್ಗಳಲ್ಲಿ ಕೇಜ್ರಿವಾಲ್ ಅವರ ಕೌನ್ಸಿಲರ್ಗಳು ಇದ್ದರೆ, ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಒತ್ತು ನೀಡಲಿದ್ದಾರೆ. ಬಿಜೆಪಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ, ಅಭಿವೃದ್ಧಿ ಕಾರ್ಯಗಳಿಗೆ ಕಡಿವಾಣ ಹಾಕಲಿದ್ದಾರೆ. ಕೇಜ್ರಿವಾಲ್ ವಿರುದ್ಧ ಹೋರಾಡುವುದೊಂದೇ ಅವರ ಅಜೆಂಡಾ ಆಗಿರಲಿದೆ' ಎಂದು ಒತ್ತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.