ಮುಂಬೈ: ಕೆಲ ಸಮಯದಿಂದ ಮುನಿಸಿಕೊಂಡಿದ್ದ ಬಿಜೆಪಿ ಹಾಗೂ ಶಿವಸೇನಾ ನಡುವೆ ಮೈತ್ರಿ ಏರ್ಪಟ್ಟಿದೆ. ಮುಂಬರುವ ಲೋಕಸಭಾ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯನ್ನುಒಟ್ಟಿಗೆ ಎದುರಿಸಲು ನಿರ್ಧರಿಸಿವೆ.
ಮಹಾರಾಷ್ಟ್ರದ 48 ಲೋಕ ಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಮತ್ತು ಶಿವಸೇನಾ 23 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಸೋಮವಾರ ಸಂಜೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮೈತ್ರಿ ವಿಷಯವನ್ನು ಪ್ರಕಟಿಸಿದರು. ಮೈತ್ರಿಕೂಟವು ರಾಜ್ಯದಲ್ಲಿ ಕನಿಷ್ಠ 45 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಎರಡೂ ಪಕ್ಷಗಳ ಕೋಟ್ಯಂತರ ಕಾರ್ಯಕರ್ತರು ಮೈತ್ರಿ ಬಯಸಿದ್ದರು ಎಂದಿದ್ದಾರೆ.
ರಾಮಮಂದಿರ ನಿರ್ಮಾಣ ವಿಷಯವೇ ಉಭಯ ಪಕ್ಷಗಳ ಮೈತ್ರಿಯ ಸಮಾನ ಅಂಶ ಎಂದಿರುವ ಉದ್ಧವ್ ಠಾಕ್ರೆ, ಸದ್ಯದಲ್ಲೇ ಅದು ನೆರವೇರಲಿದೆ ಎಂದು ಹೇಳಿದ್ದಾರೆ. ಒಂದೇ ಸಿದ್ಧಾಂತ ಹೊಂದಿರುವ ಎರಡೂ ಪಕ್ಷಗಳು ರಾಷ್ಟ್ರದ ಹಿತದೃಷ್ಟಿಯಿಂದ ಒಟ್ಟಿಗೆ ಇರಬೇಕು ಎಂಬುದು ಜನರ ಆಶಯವಾಗಿತ್ತು ಎಂದು ಮಹಾರಾಷ್ಟ್ರ ಮುಖ್ಯ ಮಂತ್ರಿ ದೇವೇಂದ್ರ ಫಡಣವೀಸ್ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.