ಮುಂಬೈ: ವಿಧಾನ ಪರಿಷತ್ ಚುನಾವಣೆಯಲ್ಲಿ ಮಹಾರಾಷ್ಟ್ರದ ಆಡಳಿತಾರೂಢ ಮಹಾ ವಿಕಾಸ್ ಅಘಾಡಿ (ಎಂವಿಎ) ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.
ಪರಿಷತ್ತಿನ ಆರು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಗೆದ್ದಿದೆ. ಈ ಪೈಕಿ ನಾಲ್ಕು ಸ್ಥಾನಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.
ಪ್ರತಿಷ್ಠಿತ ಕ್ಷೇತ್ರ ನಾಗಪುರದಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಶಿವಸೇನೆಯಿಂದ ಅಕೋಲಾ–ಬುಲ್ಧಾನ–ವಾಶಿಮ್ ಕ್ಷೇತ್ರವನ್ನು ಬಿಜೆಪಿ ಕಸಿದುಕೊಂಡಿದೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ಎರಡು ಸ್ಥಾನಗಳು ಮತ್ತು ಕೊಲ್ಲಾಪುರ, ಧುಲೆ-ನಂದೂರ್ಬಾರ್, ಅಕೋಲಾ-ಬುಲ್ಧಾನ-ವಾಶಿಮ್ ಹಾಗೂ ನಾಗ್ಪುರ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳಿಂದ ತಲಾ ಒಂದು ಸ್ಥಾನಗಳಿಗೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ ಘೋಷಣೆಯಾಗಿತ್ತು. ಆದರೆ, ನಾಗ್ಪುರ ಮತ್ತು ಅಕೋಲಾ-ಬುಲ್ಧಾನ-ವಾಶಿಮ್ ಕ್ಷೇತ್ರದಲ್ಲಿ ಮತದಾನ ನಡೆದಿದ್ದು, ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದೆ.
ನಾಗ್ಪುರ್ ಕ್ಷೇತ್ರದಿಂದ ಬಿಜೆಪಿಯ ಚಂದ್ರಶೇಖರ ಬಾವನಕುಳೆ, ಅಕೋಲಾ-ಬುಲ್ಧಾನ-ವಾಶಿಮ್ ಕ್ಷೇತ್ರದಿಂದ ವಸಂತ ಖಂಡೇಲ್ವಾಲ್ ಚುನಾಯಿತರಾಗಿದ್ದಾರೆ.
ಬೃಹತ್ ಮುಂಬೈ ಮಹಾನಗರ ಪಾಲಿಕೆಯ ದ್ವಿಸದಸ್ಯ ಕ್ಷೇತ್ರದಿಂದ ಶಿವಸೇನೆಯ ಸುನೀಲ್ ಶಿಂಧೆ ಮತ್ತು ಬಿಜೆಪಿಯ ರಾಜಹಂಸ್ ಸಿಂಗ್, ಕೊಲ್ಲಾಪುರದಿಂದ ಗೃಹ ಖಾತೆ ರಾಜ್ಯ ಸಚಿವ ಸತೇಜ್ ಪಾಟೀಲ್ ಹಾಗೂ ಧುಲೆ-ನಂದೂರ್ಬಾರ್ ಕ್ಷೇತ್ರದಿಂದ ಬಿಜೆಪಿಯ ಅಮರೀಶ್ ಪಟೇಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.