ADVERTISEMENT

ಕ್ಷಮೆ ಕೇಳದ ಹೊರತು ರಾಹುಲ್‌ ಗಾಂಧಿಗೆ ಮಾತನಾಡಲು ಅವಕಾಶ ನೀಡದಿರಲು ಬಿಜೆಪಿ ಯೋಜನೆ

ಸದನದಲ್ಲಿ ಮಾತನಾಡಲು ಸತತ ಎರಡನೇ ದಿನವೂ ರಾಹುಲ್‌ ಗಾಂಧಿಗೆ ಸಿಗದ ಅವಕಾಶ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2023, 6:48 IST
Last Updated 17 ಮಾರ್ಚ್ 2023, 6:48 IST
   

ನವದೆಹಲಿ: ಲಂಡನ್‌ನಲ್ಲಿ ಮಾಡಿರುವ ಭಾಷಣಕ್ಕೆ ಕ್ಷಮೆ ಕೇಳದ ಹೊರತು ರಾಹುಲ್‌ ಗಾಂಧಿ ಅವರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ಮೂಲಗಳು ಹೇಳಿದ್ದಾಗಿ ‘ಎನ್‌ಡಿಟಿವಿ‘ ವರದಿ ಮಾಡಿದೆ.

ಲಂಡನ್‌ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯ ಸೇರಿ ಹಲವು ಕಾರ್ಯಕ್ರಮಗಳಲ್ಲಿ ರಾಹುಲ್‌ ಗಾಂಧಿ ಅವರು ಭಾರತವನ್ನು ಅವಮಾನಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಹೀಗಾಗಿ ಅವರು ಸದನದ ಒಳಗೂ ಹೊರಗೂ ಕ್ಷಮೆ ಕೇಳಬೇಕು ಎಂದು ಕಳೆದ ಐದು ದಿನಗಳಿಂದ ಉಭಯ ಸದನದಲ್ಲಿ ಆಡಳಿತರೂಢ ಬಿಜೆಪಿ ಆಗ್ರಹಿಸುತ್ತಿದೆ. ಇದೇ ವಿಷಯ ಸಂಬಂಧ ಕಲಾಪಗಳು ನಡೆಯದೇ ಮುಂದೂಡಲಾಗುತ್ತಿದೆ.

ವಿವಾದದ ಬಳಿಕ ಗುರುವಾರ ಮೊದಲ ಬಾರಿ ಸಂಸತ್ತಿಗೆ ಆಗಮಿಸಿದ್ದ ರಾಹುಲ್‌ ಗಾಂಧಿ, ತನಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಶುಕ್ರವಾರ ಕೂಡ ಸಂಸತ್ತಿಗೆ ಆಗಮಿಸಿದ್ದರು. ಆದರೆ ಗದ್ದಲದ ನಡುವೆ ಅವರಿಗೆ ಮಾತನಾಡುವ ಅವಕಾಶ ಸಿಕ್ಕಿಲ್ಲ. ಸದ್ಯ ಮುಂದಿನ ವಾರಕ್ಕೆ ಸದನವನ್ನು ಮುಂದೂಡಲಾಗಿದೆ.

ADVERTISEMENT

ಅವರು ಕ್ಷಮೆ ಕೇಳದ ಹೊರತು ಸದನದಲ್ಲಿ ಮಾತನಾಡಲು ಅವಕಾಶ ಕೊಡಬಾರದು ಎಂದು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಏತನ್ಮಧ್ಯೆ ರಾಹುಲ್‌ ಗಾಂಧಿ ಅವರ ಭಾಷಣದ ಬಗ್ಗೆ ತನಿಖೆ ಮಾಡಲು ಸಂಸದೀಯ ಸಮಿತಿಯನ್ನು ರಚನೆ ಮಾಡಬೇಕು.ಒಂದು ವೇಳೆ ರಾಹುಲ್ ಗಾಂಧಿ ಸಂಸತ್‌ನಲ್ಲಿ ಕ್ಷಮೆ ಕೇಳದೇ ಇದ್ದರೆ, ಅವರ ಲೋಕಸಭೆ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.