ADVERTISEMENT

ಕೃಷಿ ಕಾಯ್ದೆ ಸಮಿತಿ ಸದಸ್ಯತ್ವ ನಿರಾಕರಿಸಿದ ಬಿಕೆಯು ನಾಯಕ

ಪಿಟಿಐ
Published 14 ಜನವರಿ 2021, 14:12 IST
Last Updated 14 ಜನವರಿ 2021, 14:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಂಡೀಗಡ: ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯಿಂದಾಗಿ ಉಂಟಾಗಿರುವ ಬಿಕ್ಕಟ್ಟು ಪರಿಹಾರಕ್ಕೆ ಸುಪ್ರೀಂ ಕೋರ್ಟ್‌ ನೇಮಿಸಿರುವ ನಾಲ್ವರು ಸದಸ್ಯರ ಸಮಿತಿಯಿಂದ ಹೊರಬರುವುದಾಗಿ ಭಾರತೀಯ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಭೂಪಿಂದರ್‌ ಸಿಂಗ್‌ ಮಾನ್‌ ಗುರುವಾರ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ ರಚಿಸಿರುವ ಸಮಿತಿಯ ಕುರಿತು ರೈತ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿದ್ದವು. ಇದರಲ್ಲಿರುವ ಸದಸ್ಯರು ಈ ಹಿಂದೆ ಮೂರೂ ಕೃಷಿ ಕಾಯ್ದೆಗಳ ಪರವಾಗಿದ್ದರು ಎಂದು ಆರೋಪಿಸಿದ್ದವು.

‘ಸಮಿತಿಗೆ ನಾಮನಿರ್ದೇಶನ ಮಾಡಿರುವುದಕ್ಕೆ ಧನ್ಯವಾದ. ಆದರೆ, ರೈತರ ಹಿತಾಸಕ್ತಿ ವಿಷಯದಲ್ಲಿ ರಾಜಿಯಾಗುವುದನ್ನು ತಪ್ಪಿಸಲು ಯಾವ ಹುದ್ದೆಯನ್ನಾದರೂ ತ್ಯಜಿಸಲು ನಾನು ಸಿದ್ಧ. ರೈತ ಸಂಘಟನೆಗಳು ಹಾಗೂ ಜನರಲ್ಲಿ ಇರುವ ಸಂಶಯವನ್ನು ದೂರಗೊಳಿಸಲು ಈ ನಿರ್ಧಾರ ಕೈಗೊಂಡಿದ್ದೇನೆ. ಸಮಿತಿಯ ಸದಸ್ಯನಾಗುವುದನ್ನು ನಾನು ನಿರಾಕರಿಸುತ್ತಿದ್ದು, ಪಂಜಾಬ್‌ ಹಾಗೂ ದೇಶದ ರೈತರ ಜೊತೆ ನಾನಿರಲಿದ್ದೇನೆ’ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ADVERTISEMENT

ಕಳೆದ ಮಂಗಳವಾರ ಕೃಷಿ ಸುಧಾರಣೆಯ ಮೂರು ಕಾಯ್ದೆಗಳ ಜಾರಿಗೆ ಮುಂದಿನ ಆದೇಶದವರೆಗೂ ತಡೆ ನೀಡಿದ್ದ ಸುಪ್ರೀಂ ಕೋರ್ಟ್‌, ಸರ್ಕಾರದ ಅಭಿಪ್ರಾಯ ಹಾಗೂ ರೈತರ ಸಲಹೆ ಸೂಚನೆಗಳನ್ನು ಆಲಿಸಲು ಸಮಿತಿಯೊಂದನ್ನು ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.