ಬಂಧನ (ಸಾಂದರ್ಭಿಕ ಚಿತ್ರ)
ಮುಂಬೈ: ಕುವೆಟ್ನಿಂದ ಪಾಕಿಸ್ತಾನದ ಮೂಲಕ ಸಮುದ್ರ ಮಾರ್ಗವಾಗಿ ದೋಣಿಯಲ್ಲಿ ಭಾರತದ ತೀರವನ್ನು ಅಕ್ರಮವಾಗಿ ಪ್ರವೇಶಿಸಿದ ತಮಿಳುನಾಡು ಮೂಲದ ಮೂವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ನಿಟ್ಸೋ ಡಿಟ್ಟೊ (31), ವಿಜಯ್ ವಿನಯ್ ಆಂಥೋನಿ (29), ಜೆ. ಸಹಾಯತ್ತ ಅನೀಶ್ (29) ಬಂಧಿತರು. ಇವರನ್ನು ಇಲ್ಲಿನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಇವರ ವಿರುದ್ಧ ದೇಶ ಪ್ರವೇಶಿಸಲು ಅಗತ್ಯ ಪಾಸ್ಪೋರ್ಟ್ ನಿಯಮಗಳನ್ನು ಪಾಲಿಸದಿರುವ ಆಪಾದನೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಂಗಳವಾರ ಬೆಳಿಗ್ಗೆ ಮುಂಬೈ ಕರಾವಳಿಯಲ್ಲಿ ಗಸ್ತು ತಿರುಗುತ್ತಿದ್ದಾಗ ಬೋಟ್ ಪತ್ತೆಯಾಗಿತ್ತು. ‘ಪ್ರಾಥಮಿಕ ತನಿಖೆಯ ಸಮಯದಲ್ಲಿ, ಆರೋಪಿಗಳು ಜನವರಿ 28 ರಂದು ಕುವೆಟ್ನಿಂದ ಹೊರಟು ಸೌದಿ ಅರೇಬಿಯಾ, ಕತಾರ್, ದುಬೈ, ಮಸ್ಕತ್, ಓಮನ್ ಮತ್ತು ಪಾಕಿಸ್ತಾನಕ್ಕೆ ಪ್ರಯಾಣಿಸಿ ಅಲ್ಲಿಂದ ಭಾರತದ ತೀರ ಪ್ರವೇಶಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರೂ ಸಾಗಿದ ಮಾರ್ಗವನ್ನು, ಇವರು ಕುವೆಟ್ನಲ್ಲಿ ಅಥವಾ ತಾವು ಪಯಣಿಸಿದ ಮಾರ್ಗದಲ್ಲಿ ಏನಾದರೂ ಅಪರಾಧ ಚಟುವಟಿಕೆ ನಡೆಸಿದ್ದಾರೆಯೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯವು ಬುಧವಾರ ಮೂವರನ್ನು ಫೆ.10ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಕುವೆಟ್ನಲ್ಲಿ ತಮ್ಮ ಉದ್ಯೋಗದಾತರು ಪಾಸ್ಪೋರ್ಟ್ ಕಸಿದುಕೊಂಡು, ಕೆಟ್ಟದಾಗಿ ನಡೆಸಿಕೊಂಡ ಕಾರಣಕ್ಕೆ ಈ ಮೂವರು ಅವರಿಂದ ತಪ್ಪಿಸಿಕೊಂಡು ಬಂದಿದ್ದಾರೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.