ಅಸ್ಸಾಂ: ಕಲ್ಲಿದ್ದಲು ಗಣಿ ದುರಂತ, ರಕ್ಷಣಾ ಕಾರ್ಯಾಚರಣೆ
(ಪಿಟಿಐ ಚಿತ್ರ)
ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಲುಕಿದ್ದ ಒಂಬತ್ತು ಕಾರ್ಮಿಕರ ಪೈಕಿ ಓರ್ವನ ಮೃತದೇಹವನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿಪುಣ ತರಬೇತಿ ಪಡೆದ ಸೇನೆಯ ಡೈವರ್ಗಳು ಇಂದು ಮೃತದೇಹವನ್ನು ಹೊರತೆಗೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಲ್ಲಿದ್ದಲು ಗಣಿ ದುರಂತದಲ್ಲಿ ಸಿಲುಕಿಕೊಂಡಿರುವ ಉಳಿದ ಎಂಟು ಮಂದಿಯ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ. ಆದರೆ ಬದುಕುಳಿಕುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಸೇನೆ, ನೌಕಾಪಡೆ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.
ಉಮರಂಗಸೊದ 3 ಕಿ.ಮೀ. ಪ್ರದೇಶದಲ್ಲಿ ಸ್ಥಿತಗೊಂಡಿರುವ ಸ್ಥಳೀಯ ಕಲ್ಲಿದ್ದಲು ಗಣಿಯಲ್ಲಿ ಹಠಾತ್ ನೀರು ತುಂಬಿಕೊಂಡ ಪರಿಣಾಮ ಕಾರ್ಮಿಕರು ಸಿಲುಕಿಕೊಂಡಿದ್ದರು.
ರಕ್ಷಣಾ ತಂಡಗಳು ಗಣಿಯೊಳಗೆ ಸಮರೋಪಾದಿಯಲ್ಲಿ ದಿನದ 24 ಗಂಟೆಯೂ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸಂತಾಪ ಸೂಚಿಸಿದ್ದಾರೆ. ನೇಪಾಳ ಮೂಲದ ಕಾರ್ಮಿಕನ ಗುರುತು ಪತ್ತೆ ಹಚ್ಚಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಸಿಎಂ ಮಂಗಳವಾರ ಮಾಹಿತಿ ನೀಡಿದ್ದರು.
ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರ ಪ್ರಕಾರ, ಗಣಿಯಲ್ಲಿ ಸುಮಾರು 15 ಕಾರ್ಮಿಕರು ಇದ್ದರು ಎನ್ನಲಾಗಿದೆ. ಆದರೆ ಅಧಿಕಾರಿಗಳು ಈ ಕುರಿತು ಸ್ಪಷ್ಟಪಡಿಸಿಲ್ಲ.
ಅಸ್ಸಾಂ: ಕಲ್ಲಿದ್ದಲು ಗಣಿ ದುರಂತ, ರಕ್ಷಣಾ ಕಾರ್ಯಾಚರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.