ADVERTISEMENT

370ನೇ ವಿಧಿ ಅಸಿಂಧು: ಬಾಲಿವುಡ್ ಮೌನ

ಏಜೆನ್ಸೀಸ್
Published 7 ಆಗಸ್ಟ್ 2019, 5:22 IST
Last Updated 7 ಆಗಸ್ಟ್ 2019, 5:22 IST
   

ನವದೆಹಲಿ (ಪಿಟಿಐ):370ನೇ ವಿಧಿ ಅಸಿಂಧು ಕುರಿತಂತೆ ಅನುಪಮ್ ಖೇರ್, ಪರೇಶ್ ರಾವಲ್ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಪ್ರತಿಕ್ರಿಯಿಸಿದ್ದನ್ನು ಹೊರತುಪಡಿಸಿದರೆ, ಬಹುತೇಕ ಬಾಲಿವುಡ್ ಈ ಬಗ್ಗೆ ಮೌನ ವಹಿಸಿತ್ತು.

ಉದ್ದಿಮೆಯ ಹಲವರು ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದರೆ, ದೊಡ್ಡ ಸ್ಟಾರ್‌ಗಳು ಅಂತರ ಕಾಯ್ದುಕೊಂಡಿದ್ದಾರೆ. ಖಾನ್‌ತ್ರಯರಾದ ಅಮೀರ್, ಸಲ್ಮಾನ್, ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಯಾವುದೇ ಟ್ವೀಟ್ ಮಾಡಿಲ್ಲ.

ನ್ಯೂಯಾರ್ಕ್‌ನಲ್ಲಿರುವ ಅನುಪಮ್ ಖೇರ್, ಇದು ತಮ್ಮ ಜೀವನದ ಒಳ್ಳೆಯ ಸುದ್ದಿಗಳಲ್ಲಿ ಒಂದು ಎಂದು ಪ್ರತಿಕ್ರಿಯಿಸಿದ್ದಾರೆ. ನನ್ನ ಜೀವನಚರಿತ್ರೆ ಪುಸ್ತಕ ಬಿಡುಗಡೆಯಾಗುವ ದಿನವೇ ಈ ಸುದ್ದಿ ಬಂದಿದ್ದು, ನನಗೆ ಉಡುಗೊರೆಯೇ ಸಿಕ್ಕಂತಾಗಿದೆ ಭಾನುವಾರ ಗೂಢಾರ್ಥದಲ್ಲಿ ಟ್ವೀಟ್ ಮಾಡಿದ್ದ ಅವರು ‘ಕಾಶ್ಮೀರ ಸಮಸ್ಯೆಗೆ ಪರಿಹಾರ ಆರಂಭವಾಗಿದೆ’ ಎಂದಿದ್ದರು.

ADVERTISEMENT

ಬಿಜೆಪಿ ಮಾಜಿ ಸಂಸದ ಹಾಗೂ ನಟ ಪರೇಶ್ ರಾವಲ್, ‘ಇಂದು ನಮ್ಮ ತಾಯ್ನಾಡಿಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಇಡೀ ದೇಶವೇ ಇಂದು ನಿಜಾರ್ಥದಲ್ಲಿ ಒಂದು ಎನಿಸಿದೆ. ಜೈ ಹಿಂದ್’ ಎಂದು ಹೇಳಿದ್ದಾರೆ.ಕೇಂದ್ರದ ನಿರ್ಧಾರನಿಜವಾಗಿಯೂ ದಿಟ್ಟ ಕ್ರಮ ಎಂದು ನಟಿ ಗುಲ್ ಪನಾಗ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಇನ್ನುಮುಂದೆ ಶಾಂತಿ ನೆಲೆಸಲಿದೆ ಎಂದು ಕೇಜ್ರಿವಾಲ್ ಮಾಡಿದ್ದ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ನಟ ಅನುಭವ್ ಸಿನ್ಹಾ, ‘ಶಾಂತಿನಾ ಸರ್??? ನಿಜವಾಗಲೂ???’ ಎಂದು ಪ್ರಶ್ನಿಸಿದ್ದಾರೆ.

ಐತಿಹಾಸಿಕ ಕ್ರಮ ಎಂದು ಕರೆದಿರುವ ಜಮ್ಮು ಮೂಲದ ನಟ ಮೋಹಿತ್ ರೈನಾ, ಇದರಿಂದ ಕಣಿವೆಯ ಜನರಿಗೆ ಶಿಕ್ಷಣ ಹಾಗೂ ಉದ್ಯೋಗ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಕಾಶ್ಮೀರ ಹಾಗೂ ಕಾಶ್ಮೀರಿಗಳ ಶಾಂತಿಯುತ ಅಭಿವೃದ್ಧಿ ಆಶಿಸುತ್ತೇನೆ ಎಂದು ನಟಿ ರವೀನಾ ಟಂಡನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.