ADVERTISEMENT

ರಾಹುಲ್ ಗಾಂಧಿ ದೇಶ ವಿರೋಧಿ ಶಕ್ತಿಗಳ ‘ರಾಷ್ಟ್ರೀಯ ವಕ್ತಾರ’: UP ಡಿಸಿಎಂ ಬ್ರಜೇಶ್

ಪಿಟಿಐ
Published 25 ಫೆಬ್ರುವರಿ 2026, 2:29 IST
Last Updated 25 ಫೆಬ್ರುವರಿ 2026, 2:29 IST
<div class="paragraphs"><p>ಬ್ರಜೇಶ್ ಪಾಠಕ್‌ ಮತ್ತು ರಾಹುಲ್ ಗಾಂಧಿ</p></div>

ಬ್ರಜೇಶ್ ಪಾಠಕ್‌ ಮತ್ತು ರಾಹುಲ್ ಗಾಂಧಿ

   

ಲಖನೌ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ದೇಶ ವಿರೋಧಿ ಶಕ್ತಿಗಳ ‘ರಾಷ್ಟ್ರೀಯ ವಕ್ತಾರ’ ಆಗಿದ್ದಾರೆ ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್‌ ಟೀಕಿಸಿದ್ದಾರೆ.

ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವು ದೇಶದ ರೈತರ ಹಿತಾಸಕ್ತಿಗೆ ವಿರುದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡಕ್ಕೆ ಸಿಲುಕಿ ಈ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಾಯ ಚರ್ಚೆಯಲ್ಲಿ ಮಾತನಾಡಲು ಅವಕಾಶ ನೀಡಲಿಲ್ಲ ಎಂದು ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದರು.

ADVERTISEMENT

ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಪಾಠಕ್‌, ‘ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರಿಗೆ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೆನೂ ಗೊತ್ತಿಲ್ಲ’ ಎಂದಿದ್ದಾರೆ.

‘ರಾಹುಲ್ ಪ್ರತಿದಿನ ಪ್ರಧಾನಿ ಮೋದಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆಧಾರರಹಿತ ಆರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಅವರು ಹೊರಹಾಕುವ ವಿಷವು ಖಂಡನೀಯ ಮಾತ್ರವಲ್ಲದೆ ದೇಶದ್ರೋಹವೂ ಆಗಿದೆ’ ಎಂದು ಪಾಠಕ್‌ ವಾಗ್ದಾಳಿ ನಡೆಸಿದ್ದಾರೆ.

‘ರಾಹುಲ್ ಗಾಂಧಿ ಅವರ ರಾಜಕೀಯ ಮೌಲ್ಯಗಳು ಎಷ್ಟರ ಮಟ್ಟಿಗೆ ಕುಸಿದಿವೆ ಎಂಬುದನ್ನು ಇಡೀ ದೇಶವೇ ನೋಡುತ್ತಿದೆ. ರಾಹುಲ್ ನಕಾರಾತ್ಮಕ ರಾಜಕೀಯದ ಅತಿದೊಡ್ಡ ಬ್ರಾಂಡ್ ರಾಯಭಾರಿಯಾಗಿದ್ದು, ದೇಶದಲ್ಲಿ ಅರಾಜಕತೆ ಸೃಷ್ಟಿಸುವುದು, ಗಲಭೆಗಳನ್ನು ಪ್ರಚೋದಿಸುವುದು, ವಿದೇಶಿ ವೇದಿಕೆಗಳಲ್ಲಿ ದೇಶವನ್ನು ದೂಷಿಸುವುದು, ಸುಳ್ಳು ವದಂತಿಗಳನ್ನು ಹರಡುವ ಮೂಲಕ ಜನರನ್ನು ಪ್ರಚೋದಿಸುವುದೊಂದೇ ಅವರ ಏಕೈಕ ಉದ್ದೇಶ’ ಎಂದು ಕಿಡಿಕಾರಿದ್ದಾರೆ.

‘ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಅಂಗಿ ತೆಗೆದು ಪ್ರತಿಭಟನೆ ನಡೆಸಿರುವುದನ್ನು ರಾಹುಲ್ ಸಮರ್ಥಿಸಿಕೊಂಡಿದ್ದಾರೆ. ಪ್ರತಿಭಟನೆ ನಡೆಸಿದವರು ‘ಬಬ್ಬರ್‌ಶೇರ್‌ ಕಾಮ್ರೇಡ್ಸ್’ ಎಂದು ಹೊಗಳಿದ್ದಾರೆ. ರಾಹುಲ್‌ ಗಾಂಧಿಯೇ ಪ್ರತಿಭಟನೆ ಹಿಂದಿನ ನಿಜವಾದ ಸೂತ್ರಧಾರಿ’ ಎಂದೂ ಅವರು ಗುಡುಗಿದ್ದಾರೆ.

ಮಂಗಳವಾರ ‘ಎಕ್ಸ್‌’ನಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದ ರಾಹುಲ್, ‘ಅಮೆರಿಕದಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ಪ್ರಧಾನಿ ಮೋದಿ ಅವರಿಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಆಡಳಿತಾರೂಢ ಬಿಜೆಪಿ ಮತ್ತು ಅವರ ಆಪ್ತರ ವಿರುದ್ಧದ ಪ್ರಕರಣವಾಗಿದೆ’ ಎಂದಿದ್ದರು.

ದೆಹಲಿಯಲ್ಲಿ ನಡೆದ ಎಐ ಶೃಂಗಸಭೆಯ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಗೆ ಸಂಬಂಧ ಪ್ರತಿಕ್ರಿಯಿಸಿದ್ದ ರಾಹುಲ್, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮೋದಿ ರಾಜಕೀಯ ದಾಳಿ ನಡೆಸಿದ್ದಾರೆ ಎಂದು ದೂರಿದ್ದರು.

‘ನಾವು ದೇಶದ ಧ್ವನಿ. ಸರ್ವಾಧಿಕಾರಿಗಳಿಗೆ ಹೆದರುವುದಿಲ್ಲ. ಸಂವಿಧಾನಕ್ಕಾಗಿ ನಾವು ಹೋರಾಟ ನಡೆಸುತ್ತೇವೆ. ನಾವು ದೇಶಕ್ಕಾಗಿ ಬದುಕುತ್ತೇವೆ’ ಎಂದಿದ್ದರು. ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕಾರ್ಯಕರ್ತರ ಬಂಧನ ಖಂಡಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.