ನವದೆಹಲಿ: ಕೋವಿಡ್–19ನಿಂದಾಗಿ ಗಡಿಭದ್ರತಾ ಪಡೆಯ (ಬಿಎಸ್ಎಫ್) ಯೋಧರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಬುಧವಾರ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾನ್ಸ್ಟೆಬಲ್ ವಿನೋದ್ ಕುಮಾರ್ ಪ್ರಸಾದ್ (35) ಜೂನ್ 9ರಂದು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕೋವಿಡ್–19ನಿಂದಾಗಿ ಸಾವನ್ನಪ್ಪಿದ್ದಾರೆ.ಇದರಿಂದ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯಲ್ಲಿ (ಸಿಎಪಿಎಫ್) ಕೋವಿಡ್–19ನಿಂದ ಸಾವಿಗೀಡಾದವರ ಸಂಖ್ಯೆ 14ಕ್ಕೆ ಏರಿದಂತಾಗಿದೆ.
‘ವಿನೋದ್ ಅವರನ್ನು ಕಾನೂನು ಸುವ್ಯವಸ್ಥೆ ಪಾಲನೆಗಾಗಿ ದೆಹಲಿ ಪೊಲೀಸರೊಂದಿಗೆ ಸೇವೆಗೆ ನಿಯೋಜಿಸಲಾಗಿತ್ತು. ನಿಶ್ಯಕ್ತಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದ ಅವರನ್ನು ಜೂನ್ 5ರಂದು ಏಮ್ಸ್ಗೆ ದಾಖಲಿಸಲಾಗಿತ್ತು. ಜೂನ್ 6ರಂದು ಕೋವಿಡ್–19 ಪರೀಕ್ಷೆ ಮಾಡಿಸಿದಾಗ ನೆಗೆಟಿವ್ ಎಂದು ಬಂದಿತ್ತು. ಆದರೆ, ಜೂನ್ 8ರಂದು ಫಲಿತಾಂಶ ಪಾಸಿಟಿವ್ ಎಂದು ಬಂದಿತ್ತು’ ಎಂದು ಬಿಎಸ್ಎಫ್ ವಕ್ತಾರ ತಿಳಿಸಿದ್ದಾರೆ.
ಸಿಎಪಿಎಫ್ನಲ್ಲಿ ಕೋವಿಡ್–19ನಿಂದ ಸಾವನ್ನಪ್ಪಿದವರಲ್ಲಿ ವಿನೋದ್ ಕಿರಿಯರು. ಇತರ ಉಳಿದವರು 45 ವರ್ಷಕ್ಕಿಂತ ಮೇಲ್ಪಟ್ಟವರು ಎಂದುಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.