ADVERTISEMENT

ಬುರಾರಿ ಪ್ರಕರಣ: ಆತ್ಮಹತ್ಯೆ ಶಂಕೆಗೆ ಪೂರಕ ಸಾಕ್ಯ್ಯ ಲಭ್ಯ

ಸಾಯುವ ಮುನ್ನ ಸ್ಟೂಲ್, ವೈರ್‌ ತಂದಿಟ್ಟುಕೊಂಡಿದ್ದು ಸಿಸಿಟಿವಿಯಲ್ಲಿ ಸೆರೆ

ಪಿಟಿಐ
Published 5 ಜುಲೈ 2018, 19:59 IST
Last Updated 5 ಜುಲೈ 2018, 19:59 IST

ನವದೆಹಲಿ: ಇಲ್ಲಿನ ಬುರಾರಿ ಪ್ರದೇಶದಲ್ಲಿ ಒಂದೇ ಕುಟುಂಬದ 11 ಮಂದಿಯ ನಿಗೂಢ ಸಾವು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ, ಇದು ಆತ್ಮಹತ್ಯೆ ಎಂಬ ತೀರ್ಮಾನಕ್ಕೆ ಬರಲು ಪೂರಕವಾಗುವಂತಹ ಕೆಲವು ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿವೆ.

ನೇಣು ಬಿಗಿಯಲು ಬಳಸಿರುವ ಸ್ಟೂಲ್ ಮತ್ತು ವೈರ್‌ಗಳನ್ನು ಕುಟುಂಬದ ಕೆಲವು ಸದಸ್ಯರು ಹೊರಗಿನಿಂದ ಮನೆಯೊಳಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಅಲ್ಲದೆ, 11 ವರ್ಷಗಳಿಂದ ನಿರ್ವಹಿಸಲಾಗುತ್ತಿದ್ದ 11 ಡೈರಿಗಳನ್ನೂ ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಬರೆದಿರುವುದಕ್ಕೂ ಮೃತರ ಸಾವಿನ ರೀತಿಗೂ ತಾಳೆಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

‘ಒಂದು ಬಟ್ಟಲಿನಲ್ಲಿ ನೀರಿಡಬೇಕು, ಅದರ ಬಣ್ಣ ಬದಲಾಗುತ್ತಿದ್ದಂತೆಯೇ ನಿಮ್ಮನ್ನು ರಕ್ಷಿಸಲಾಗುತ್ತದೆ’ ಎಂದು ಡೈರಿಯಲ್ಲಿ ಬರೆಯಲಾಗಿದೆ. ನೇಣು ಬಿಗಿದುಕೊಂಡರೂ ತಾವು ಸಾಯುವುದಿಲ್ಲ ಎಂದು ನಂಬಿದ್ದ ಕುಟುಂಬದ ಸದಸ್ಯರು, ‘ಭೂಮಿ ನಡುಗುತ್ತದೆ, ಆಕಾಶದಲ್ಲಿ ಗುಡುಗು ಮೊಳಗುತ್ತದೆ, ಆಗ ನಮ್ಮನ್ನು ಕಾಪಾಡಲಾಗುತ್ತದೆ’ ಎಂದು ನಂಬಿದ್ದರು. ಈ ನಂಬಿಕೆಯಿಂದಲೇ ಇಂತಹ ದುಸ್ಸಾಹಸಕ್ಕೆ ಕೈ ಹಾಕಿದ್ದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

ಕುಟುಂಬದ ಹಿರಿಯ ಸೊಸೆ ಸವಿತಾ ತಮ್ಮ ಮಗಳು ನೀತು ಜೊತೆ ಐದು ಸ್ಟೂಲ್‌ಗಳನ್ನು ಮನೆಯ ಒಳಗೆ ತೆಗೆದುಕೊಂಡು ಹೋಗಿರುವುದು, ಎದುರಿನ ಮನೆಯ ಹೊರಭಾಗದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿದೆ. ಅಲ್ಲದೆ, ಮೃತರಲ್ಲಿ ಕಿರಿಯರಾದ 15 ವರ್ಷದ ಧ್ರುವ‌ ಮತ್ತು ಶಿವಂ ರಾತ್ರಿ 10.15ರ ಸುಮಾರಿಗೆ ಪ್ಲೈವುಡ್ ಅಂಗಡಿಯಿಂದ ಎಲೆಕ್ಟ್ರಿಕಲ್ ವೈರ್‌ ಅನ್ನು ಮನೆಗೆ ತೆಗೆದುಕೊಂಡು ಹೋಗಿರುವುದು ಸಹ ಇದರಲ್ಲಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.