ADVERTISEMENT

ಬುರಾರಿ ಪ್ರಕರಣ: ಮನೋವೈಜ್ಞಾನಿಕ ಪರೀಕ್ಷೆಗೆ ಮುಂದಾದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2018, 11:42 IST
Last Updated 6 ಜುಲೈ 2018, 11:42 IST

ನವದೆಹಲಿ (ಪಿಟಿಐ): ಬುರಾರಿ ಕುಟುಂಬದ 11 ಜನರ ನಿಗೂಢ ಸಾವಿನ ಕುರಿತು ಮನೋವೈಜ್ಞಾನಿಕ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

‘ಈ ಪರೀಕ್ಷೆಯಲ್ಲಿ,ಮೃತರ ಕುಟುಂಬದವರ ಸದಸ್ಯರು, ಸಂಬಂಧಿಕರು ಹಾಗೂಸ್ನೇಹಿತರ ಮಾನಸಿಕ ಸ್ಥಿತಿ ಪರೀಕ್ಷಿಸಿ, ಮೃತರ ಕುರಿತು ಅವರಿಂದ ಸಂಪೂರ್ಣ ಮಾಹಿತಿ ಪಡೆಯಲಾಗುತ್ತದೆ. ಆದರೆ ಪರೀಕ್ಷೆ ನಡೆಸುವ ವೈದ್ಯರು ಯಾರೆನ್ನುವುದು ಮಾತ್ರ ನಿಗದಿಯಾಗಿಲ್ಲ’ ಎಂದು ಅವರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷೆಯ ಅಂತಿಮ ವರದಿಗಾಗಿ ಕಾಯುತ್ತಿದ್ದೇವೆ. ಕುಟುಂಬ ಸದಸ್ಯರಿಗೆ ವಿಷಪ್ರಾಶನ ಮಾಡಲಾಗಿತ್ತೆ ಎನ್ನುವುದನ್ನು ಪತ್ತೆ ಹಚ್ಚುವ ಸಲುವಾಗಿ ಅಂಗಾಂಗ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ ಎಂದುಪೊಲೀಸರು ತಿಳಿಸಿದ್ದಾರೆ.

ADVERTISEMENT

ದೂರವಾಣಿ ಕರೆ ಪರಿಶೀಲನೆ

ಮೃತಪಟ್ಟ 11 ಜನರ ದೂರವಾಣಿ ಕರೆ ಮಾಹಿತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಅವರೊಂದಿಗೆ ಮಾತನಾಡಿದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕುಟುಂಬ ಸದಸ್ಯರು, ನೆರೆಹೊರೆಯವರು ಸೇರಿದಂತೆ ಈತನಕ 100ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

‘ನಿರ್ದಿಷ್ಟವಾಗಿ ಕಳೆದ ನಾಲ್ಕೈದು ತಿಂಗಳ ಮಾಹಿತಿ ಕುರಿತು ಗಮನಹರಿಸಲಾಗುತ್ತದೆ. ಶನಿವಾರ ತಡರಾತ್ರಿ ಕುಟುಂಬದವರು ಮಾಡಿದ ಆಲದ ಮರದ ಪೂಜಾ ವಿಧಾನ ಕುರಿತುಡೈರಿಯಲ್ಲಿ ಉಲ್ಲೇಖ ಮಾಡಿರುವುದು ಇದೇ ಸಂದರ್ಭದಲ್ಲಿ.ದೂರವಾಣಿ ಕರೆ ಮಾಹಿತಿ ಆಧರಿಸಿ 500ಕ್ಕೂ ಹೆಚ್ಚು ಜನರ ಪಟ್ಟಿ ಮಾಡಲಾಗಿದೆ. ಇವರೆಲ್ಲರನ್ನೂ ವಿವಿಧ ತಂಡಗಳು ವಿಚಾರಣೆಗೆ ಒಳಪಡಿಸಲಿವೆ’ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.