ನವದೆಹಲಿ: ಕೇಂದ್ರ ಸರ್ಕಾರದ ಸಚಿವಾಲಯಗಳಿಗೆ ಇದೇ ಮೊದಲ ಬಾರಿ ವಿವಿಧ ಕ್ಷೇತ್ರದ ಒಂಬತ್ತು ವೃತ್ತಿಪರರನ್ನು ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಈ ಪ್ರಕ್ರಿಯೆ ಪ್ರಾರಂಭಗೊಂಡು ಹತ್ತು ದಿನಗಳ ಬಳಿಕ ಖಾಸಗಿ ವಲಯದ ಪರಿಣತರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗಿದೆ.
ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಉತ್ತೀರ್ಣರಾದವರ ಬದಲು ಇದೇ ಮೊದಲ ಬಾರಿಗೆ ಖಾಸಗಿ ವಲಯದ ವಿಷಯ ಪರಿಣತರನ್ನು ಈ ಹುದ್ದೆಗಳಿಗೆ ಪರಿಗಣಿಸಲಾಗಿದೆ.
ಅಂಬರ್ ದುಬೆ (ನಾಗರಿಕ ವಿಮಾನಯಾನ ಸಚಿವಾಲಯ), ದಿನೇಶ್ ದಯಾನಂದ ಜಗದಾಳೆ (ನವೀನ ಮತ್ತು ನವೀಕರಿಸಬಹುದಾದ ಇಂಧನ), ಕಕೊಲೀ ಘೋಷ್ (ಕೃಷಿ), ಅರುಣ್ ಗೋಯಲ್ (ವಾಣಿಜ್ಯ), ರಾಜೀವ್ ಸಕ್ಸೇನಾ (ಆರ್ಥಿಕ ವ್ಯವಹಾರ) ಸೌರಭ್ ಮಿಶ್ರಾ (ಹಣಕಾಸು ಸೇವೆಗಳು), ಸುಮನ್ ಪ್ರಸಾದ್ ಸಿಂಗ್ (ಸಾರಿಗೆ) ಮತ್ತು ಭೂಷಣ್ ಕುಮಾರ್ (ಹಡಗು ಅಥವಾ ಬಂದರು), ಸುಜಿತ್ಕುಮಾರ್ ವಾಜಪೇಯಿ (ಪರಿಸರ) ಅವರನ್ನು ಜಂಟಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.
ಕಳೆದ ಜೂನ್ನಲ್ಲಿ ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. 6,077 ಗಣ್ಯರು ಅರ್ಜಿ ಸಲ್ಲಿಸಿದ್ದರು. ಅವರ ಪೈಕಿ, 89 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿತ್ತು.ಕಂದಾಯ ಇಲಾಖೆ ಸಂದರ್ಶನ ನಡೆಸಿತ್ತು. ಗುತ್ತಿಗೆ ಆಧಾರದ ಮೇಲೆ ಈ ತಜ್ಞರು ಕಾರ್ಯನಿರ್ವಹಿಸಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.