ADVERTISEMENT

ಉತ್ತರಪ್ರದೇಶದಲ್ಲಿ ಚತುಷ್ಕೋನ ಸ್ಪರ್ಧೆ

ಎಸ್‌ಪಿ– ಬಿಎಸ್‌ಪಿ ಮೈತ್ರಿ ಮುರಿದುಬಿದ್ದ ಪರಿಣಾಮ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
   

ಲಖನೌ (ಪಿಟಿಐ): ಉತ್ತರಪ್ರದೇಶದಲ್ಲಿ ಎಸ್‌ಪಿ– ಬಿಎಸ್‌ಪಿ ನಡುವಿನ ಮೈತ್ರಿ ಮುರಿದುಬಿದ್ದಿದೆ. ಇದರಿಂದಾಗಿ ರಾಜ್ಯದ 12 ವಿಧಾನಸಭಾ ಕ್ಷೇತ್ರಗಳಿಗೆ ಸದ್ಯದಲ್ಲೇ ನಡೆಯಲಿರುವ ಉಪ ಚುನಾವಣೆಯಲ್ಲಿ ಚತುಷ್ಕೋನ ಸ್ಪರ್ಧೆ ಉಂಟಾಗುವುದು ನಿಚ್ಚಳವಾಗಿದೆ.

11 ಮಂದಿ ಶಾಸಕರು ಈಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದರಿಂದ ಆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ. ಹಮೀರ್‌ಪುರ್‌ ಕ್ಷೇತ್ರದ ಬಿಜೆಪಿ ಶಾಸಕ ಅಶೋಕ್‌ ಕುಮಾರ್‌ ಸಿಂಗ್‌ ಚಂಡೆಲ್‌ ಅವರ ವಿರುದ್ಧದ ಕೊಲೆ ಆರೋಪ ಸಾಬೀತಾಗಿ ಅವರಿಗೆ ಜೀವಾವಧಿ ಶಿಕ್ಷೆ ಘೋಷಣೆಯಾಗಿರುವುದರಿಂದ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. ಆ ಕ್ಷೇತ್ರಕ್ಕೂ ಚುನಾವಣೆ ನಡೆಯಲಿದೆ.

2017ರಲ್ಲಿ ನಡೆದ ವಿಧಾನಸಭಾ ಚುನಾವಣೆ ಮತ್ತು ಆ ನಂತರ 2019ರಲ್ಲಿ ಲೋಕಸಭೆಗೆ ನಡೆದ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌, ಬಿಜೆಪಿ, ಎಸ್‌ಪಿ, ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು.

ADVERTISEMENT

ಮುಂಬರುವ ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿರುವ ಬಿಜೆಪಿ ಉತ್ತರಪ್ರದೇಶ ಘಟಕದ ಮಾಧ್ಯಮ ಸಂಯೋಜಕ ರಾಕೇಶ್‌ ತ್ರಿಪಾಠಿ ಅವರು, ‘ಸ್ಪರ್ಧೆ ಚತುಷ್ಕೋನವಾಗಿರಲಿ ಬಹುಕೋನದ್ದಾಗಿರಲಿ, ಬಿಜೆಪಿ ಗೆಲ್ಲುವುದು ಖಚಿತ. ಹಿಂದಿನ ಉಪಚುನಾವಣೆಗಳಲ್ಲಿ ಆಗಿರುವ ಸೋಲಿನಿಂದ ನಾವು ಪಾಠ ಕಲಿತಿದ್ದೇವೆ’ ಎಂದಿದ್ದಾರೆ.

ಆದರೆ, ‘ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಮುಂದಿನ ಉಪಚುನಾವಣೆಯಲ್ಲಿ ಅನಿರೀಕ್ಷಿತ ಫಲಿತಾಂಶ ಬರಲಿದೆ’ ಎಂದು ಕಾಂಗ್ರೆಸ್‌ನ ವಕ್ತಾರ ಅಶೋಕ್‌ ಸಿಂಗ್‌ ಹೇಳಿದ್ದಾರೆ. ‘ನಮ್ಮ ಎಲ್ಲಾ ಶ್ರಮವನ್ನು ಹಾಕಿ ಚುನಾವಣೆಗೆ ಇಳಿಯುತ್ತೇವೆ. ಫಲಿತಾಂಶವು ಉತ್ತರಪ್ರದೇಶ ವಿಧಾನಸಭೆಯ ಚಿತ್ರಣವನ್ನು ಬದಲಿಸಲಿದೆ’ ಎಂದು ಸಿಂಗ್‌ ಭರವಸೆ ವ್ಯಕ್ತಪಡಿಸಿದ್ದಾರೆ.

‘ ಉಪಚುನಾವಣೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಕಾಂಗ್ರೆಸ್‌ ಪಕ್ಷವು ಇಬ್ಬರು ಸದಸ್ಯರ ತಂಡವನ್ನು ರಾಜ್ಯಕ್ಕೆ ಕಳುಹಿಸಲು ನಿರ್ಧರಿಸಿದೆ. ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳನ್ನು ಮಾಡುವ ಹೊಣೆಯನ್ನು ಮುಖಂಡ ಅಜಯ್‌ಕುಮಾರ್‌ ಲಲ್ಲು ಅವರಿಗೆ ವಹಿಸಲಾಗಿದೆ. ಇನ್ನು ಮುಂದೆ ಎಲ್ಲಾ ಚುನಾವಣೆಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ
ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಘೋಷಿಸಿರುವುದರಿಂದ ಈ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕಾಂಗ್ರೆಸ್‌ಗೆ ಅನಿವಾರ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.