ಲಖನೌ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಉಂಟುಮಾಡಿದವರ ವಿರುದ್ಧ ರಾಂಪುರ, ಮೀರತ್ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ.
ಸಾರ್ವಜನಿಕ ಆಸ್ತಿ ಹಾನಿ ಮಾಡಿವರೇ ಅದರ ನಷ್ಟವನ್ನು ತುಂಬಿಕೊಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ ನಂತರ, ರಾಂಪುರ ಜಿಲ್ಲಾಡಳಿತ ಹಾನಿಯಾದ ಬಗ್ಗೆ ವರದಿ ಸಿದ್ಧಪಡಿಸಿದ್ದು, 28 ಜನರಿಗೆ ನೋಟಿಸ್ ನೀಡಿದೆ.
ಕಾನ್ಪುರ ಜಿಲ್ಲಾಧಿಕಾರಿ ಆಂಜನೇಯ ಕುಮಾರ್ ಸಿಂಗ್, ‘ಡಿಸೆಂಬರ್ 21ರಂದು ನಡೆದ ಪ್ರತಿಭಟನೆಯಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರನ್ನು ಸಿ.ಸಿ.ಟಿ.ವಿ ದೃಶ್ಯಾವಳಿಗಳ ಮೂಲಕ ಗುರುತಿಸಲಾಗಿದ್ದು, ಅವರ ಹೆಸರುಗಳನ್ನು ಪೊಲೀಸರಿಗೆ ಕಳುಹಿಸಲಾಗಿದೆ. ಹಾನಿಯ ಮೌಲ್ಯಮಾಪನ ಮಾಡಿ, 28 ಮಂದಿಗೆ ನೋಟಿಸ್ ನೀಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಪ್ರತಿಭಟನೆಯಲ್ಲಿ ತಮ್ಮ ಪಾತ್ರವನ್ನು ವಿವರಸಿ, ಇಲ್ಲದಿದ್ದರೆ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳಿಗೆ ಹಾನಿಯಾದ ಮೊತ್ತವನ್ನು ಕಟ್ಟಿ’ ಎಂದು ನೋಟಿಸ್ ನಲ್ಲಿ ಕೇಳಲಾಗಿದೆ.
ಜಿಲ್ಲಾದಾದ್ಯಂತ ನಷ್ಟದ ಮೊತ್ತ ಸುಮಾರು ₹25 ಲಕ್ಷ ಎಂದು ಪೊಲೀಸ್ ಮತ್ತು ಜಿಲ್ಲಾಡಳಿತ ವರದಿ ಮಾಡಿದೆ. ಮೊದಲು ನಷ್ಟದ ಮೊತ್ತ ₹15 ಲಕ್ಷ ಎಂದು ಪೊಲೀಸರು ಹೇಳಿದ್ದರು. ಆದರೆ, ಅಂತಿಮ ಮೌಲ್ಯಮಾಪನದ ನಂತರ ₹25 ಲಕ್ಷವಾಗಿದೆ ಎಂದಿದ್ದಾರೆ.
ಇನ್ನು ಮೀರತ್ನಲ್ಲಿ ಶಸ್ತ್ರಾಸ್ತ್ರ ಪರವಾನಗಿ ಹೊಂದಿರುವ 517 ಮಂದಿ ಹಾಗೂ ಎಫ್ಐಆರ್ ಆಗಿರುವ 148 ಮಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ. ‘517ರಲ್ಲಿ ಪರವಾನಗಿ ನವೀಕರಣ ಬಾಕಿ ಇರುವ 400 ಮಂದಿಯ ಅರ್ಜಿಯನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ‘ ಎಂದು ಜಿಲ್ಲಾಧಿಕಾರಿ ಅನಿಲ್ ಧಿಂಗ್ರಾ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.