ಗುವಾಹಟಿ: ಅನುಕಂಪ ಆಧಾರಿತ ನೇಮಕಾತಿಗೆ ಸಂಬಂಧಿಸಿಅಸ್ಸಾಂ ಸರ್ಕಾರ ಜಾರಿಗೊಳಿಸಿರುವ ಕುಟುಂಬ ಪಿಂಚಣಿ ಯೋಜನೆ (ಸಿಎಫ್ಪಿ) ಕಾನೂನಿಗೆ ವಿರುದ್ಧವಾಗಿದೆ. ಹೀಗಾಗಿ ಈ ಯೋಜನೆಯನ್ನು ಮರುಪರಿಶೀಲಿಸುವಂತೆ ಭಾರತದ ಲೆಕ್ಕನಿಯಂತ್ರಕರು ಹಾಗೂ ಮಹಾಲೆಕ್ಕಪರಿಶೋಧಕರು (ಸಿಎಜಿ) ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಈ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹ 156.91 ಕೋಟಿ ಹೆಚ್ಚುವರಿ ಹೊರೆ ಬೀಳುವುದು ಎಂದೂ ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿದೆ.
ಕುಟುಂಬ ಪಿಂಚಣಿ ಯೋಜನೆಗಾಗಿ ರಾಜ್ಯ ಸರ್ಕಾರ ಬಜೆಟ್ನಲ್ಲಿ ಪ್ರತ್ಯೇಕ ಹಂಚಿಕೆ ಮಾಡಿಲ್ಲ. ಇದು ಬಜೆಟ್ ಹಾಗೂ ಲೆಕ್ಕಪತ್ರ ನಿಯಮಗಳ ಉಲ್ಲಂಘನೆಯಾಗಿದೆ ಎಂದು 2019ನೇ ಸಾಲಿಗೆ ಸಂಬಂಧಿಸಿದ ವರದಿಯಲ್ಲಿ ವಿವರಿಸಲಾಗಿದೆ.
2017ಕ್ಕೂ ಮೊದಲು ಜಾರಿಗೆ ತಂದ ಅನುಕಂಪ ಆಧಾರಿತ ನೇಮಕಾತಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗಿಲ್ಲ. ಕರ್ತವ್ಯದಲ್ಲಿದ್ದಾಗ ಮೃತಪಟ್ಟ ಅಥವಾ ವೈದ್ಯಕೀಯ ಕಾರಣಗಳಿಂದ ಕಡ್ಡಾಯ ನಿವೃತ್ತಿ ತೆಗೆದುಕೊಂಡ ಉದ್ಯೋಗಿಗಳ ಉತ್ತರಾಧಿಕಾರಿಗಳ ನೇಮಕ ವಿಳಂಬಗೊಂಡಿತು. ಅಲ್ಲದೇ, ಇಂಥ ನೇಮಕಾತಿಗಳಿಗೆ ಸಂಬಂಧಿಸಿದ ದಾಖಲೀಕರಣ ಪ್ರಕ್ರಿಯೆ ಸಹ ಅಪೂರ್ಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
‘ಯೋಜನೆಯಲ್ಲಿನ ಈ ನ್ಯೂನತೆಗಳನ್ನು ಸರಿಪಡಿಸುವ ಬದಲಿಗೆ, ರಾಜ್ಯ ಸರ್ಕಾರ ಸಿಎಫ್ಪಿಯನ್ನು ಜಾರಿಗೊಳಿಸಿದ್ದು, ಇದು ಕಾನೂನಿಗೆ ವಿರುದ್ಧವಾಗಿದೆ’ ಎಂದೂ ವರದಿಯಲ್ಲಿ ವಿವರಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.