ADVERTISEMENT

ಪ್ರಚಾರಕ್ಕೆ ನಿರ್ಬಂಧ ಎಲ್ಲರಿಗೂ ಅನ್ವಯ, ಪ್ರಧಾನಿ ಮಾದರಿ ಆಗಬೇಕು: ಶಿವಸೇನಾ

ಪಿಟಿಐ
Published 9 ಜನವರಿ 2022, 1:21 IST
Last Updated 9 ಜನವರಿ 2022, 1:21 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಕೋವಿಡ್ ಹಿನ್ನೆಲೆಯಲ್ಲಿ ಪಂಚ ರಾಜ್ಯಗಳಲ್ಲಿ ನಡೆಯಲಿರುವ ಚುನಾವಣೆಯ ಬಹಿರಂಗ ಪ್ರಚಾರ ಹಾಗೂ ರೋಡ್ ಶೋಗಳನ್ನು ಜನವರಿ 15ರವರೆಗೆ ನಿರ್ಬಂಧಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶೀವಸೇನಾ ಸಂಸದ ಸಂಜಯ್ ರಾವುತ್, 'ಪ್ರಚಾರದ ಮೇಲೆ ನಿರ್ಬಂಧ ಹೇರಿರುವುದು ಎಲ್ಲರಿಗೂ ಒಂದೇ ರೀತಿ ಅನ್ವಯಿಸಬೇಕು. ಪ್ರಧಾನಿ ನರೇಂದ್ರ ಮೋದಿ ಮಾದರಿಯಾಗಬೇಕು' ಎಂದು ಹೇಳಿದ್ದಾರೆ.

'ಪಶ್ಚಿಮ ಬಂಗಾಳದ ಚುನಾವಣೆ ಸಮಯದಲ್ಲಿ ಕೋವಿಡ್ ಎರಡನೇ ಅಲೆ ಉತ್ತುಂಗದಲ್ಲಿತ್ತು. ಕೆಲವು ಪಕ್ಷಗಳ ನಾಯಕರು ವಿಶೇಷವಾಗಿ ಬಿಜೆಪಿ ಹಾಗೂ ಪ್ರಧಾನಿ ಮೋದಿ ಹೇಗೆ ಪ್ರಚಾರ ನಡೆಸಿದ್ದಾರೆ ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಆದರೆ ಈ ಬಾರಿ ಪ್ರಧಾನಿ ಮಾದರಿ ಆಗಬೇಕು' ಎಂದು ಹೇಳಿದರು.

ಉತ್ತರ ಪ್ರದೇಶ ಹಾಗೂ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ಶಿವಸೇನಾ ಸ್ಪರ್ಧಿಸುವುದಾಗಿಯೂ ಖಚಿತಪಡಿಸಿದರು.

'ಗೋವಾದಲ್ಲಿ ಶಿವಸೇನಾ-ಎನ್‌ಸಿಪಿ ಜೊತೆಯಾಗಿ ಸ್ಪರ್ಧಿಸಲಿದ್ದೇವೆ. ಕಾಂಗ್ರೆಸ್ ಕೂಡ ನಮ್ಮ ಜೊತೆಗಿರಲು ಬಯಸುತ್ತೇವೆ. ಆದರೆ ಸೀಟು ಹಂಚಿಕೆ ಸಮಸ್ಯೆಯಿದೆ. ಗೋವಾದಲ್ಲಿ ಸ್ವಂತ ಬಲದಲ್ಲಿ ಗೆಲ್ಲಬಹುದು ಎಂದು ಕಾಂಗ್ರೆಸ್ ಭಾವಿಸಿದ್ದರೆ ಅವರಿಗೆ ನಮ್ಮ ಶುಭಕಾಮನೆಗಳು' ಎಂದರು.

'ಗೋವಾದ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲು ಬಯಸುತ್ತಾರೆ. ಆದರೆ ವಿರೋಧ ಪಕ್ಷಗಳ ಒಗ್ಗಟ್ಟಿನ ಕೊರತೆಯಿಂದಾಗಿ ಅವಕಾಶ ದೊರೆತಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.