ADVERTISEMENT

ಭಾರತದ ಮಾರುಕಟ್ಟೆ, ಚೀನಾದಲ್ಲಿ ಉದ್ಯೋಗ ಸೃಷ್ಟಿಗೆ ಅವಕಾಶ ಇಲ್ಲ: ಟೆಸ್ಲಾಗೆ ಕೇಂದ್ರ

ಪಿಟಿಐ
Published 9 ಫೆಬ್ರುವರಿ 2022, 3:09 IST
Last Updated 9 ಫೆಬ್ರುವರಿ 2022, 3:09 IST
   

ನವದೆಹಲಿ: ಭಾರತದಲ್ಲಿ ಉತ್ಪಾದನಾ ಚಟುವಟಿಕೆಗಳಲ್ಲಿ ಭಾಗವಹಿಸದ ಹೊರತು ಅಮೆರಿಕ ಮೂಲದ ಎಲೆಕ್ಟ್ರಿಕ್ ವಾಹನಗಳ ಉತ್ಪಾದಕ ಕಂಪನಿ ಟೆಸ್ಲಾಗೆ ಯಾವುದೇ ರಿಯಾಯಿತಿಯನ್ನು ನೀಡಲಾಗುವುದಿಲ್ಲ ಎಂದು ಕೇಂದ್ರ ಸಚಿವ ಕ್ರಿಶನ್ ಪಾಲ್ ಗುರ್ಜರ್ ಹೇಳಿದ್ದು, ಭಾರತವನ್ನು ಮಾರುಕಟ್ಟೆ ಮಾಡಿಕೊಂಡು ಚೀನಾದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಪರಿಸ್ಥಿತಿ ಇರಬಾರದು ಎಂದು ಮಂಗಳವಾರ ಹೇಳಿದ್ದಾರೆ.

ಸರ್ಕಾರದ ನೀತಿಯ ಪ್ರಕಾರ ಕಂಪನಿಯು ಇನ್ನೂ ಯೋಜನೆಗಳಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಭಾರೀ ಕೈಗಾರಿಕೆಗಳ ರಾಜ್ಯ ಸಚಿವರು ಲೋಕಸಭೆಗೆ ಪ್ರಶ್ನೋತ್ತರ ಅವಧಿಯಲ್ಲಿ ತಿಳಿಸಿದರು.

ಕಳೆದ ವರ್ಷ, ಎಲೋನ್ ಮಸ್ಕ್ ನೇತೃತ್ವದ ಕಂಪನಿಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲಿನ ಆಮದು ಸುಂಕವನ್ನು ಕಡಿತಗೊಳಿಸಲು ಮನವಿ ಮಾಡಿತ್ತು. ಆದರೆ, ಯಾವುದೇ ತೆರಿಗೆ ರಿಯಾಯಿತಿಗಳನ್ನು ಪರಿಗಣಿಸುವ ಮೊದಲು ದೇಶದಲ್ಲಿ ತನ್ನ ಐಕಾನಿಕ್ ಇವಿಗಳ ಉತ್ಪಾದನೆಯನ್ನು ಪ್ರಾರಂಭಿಸಲು ಭಾರೀ ಕೈಗಾರಿಕೆಗಳ ಸಚಿವಾಲಯವು ಸಂಸ್ಥೆಗೆ ಸೂಚಿಸಿತ್ತು.

ADVERTISEMENT

ಆಟೋಮೊಬೈಲ್, ಆಟೋ ಬಿಡಿಭಾಗಗಳು ಮತ್ತು ಅಡ್ವಾನ್ಸ್ಡ್ ಕೆಮಿಸ್ಟ್ರಿ ಸೆಲ್ (ಎಸಿಸಿ) ಬ್ಯಾಟರಿಯನ್ನು ತಯಾರಿಸಲು ಸರ್ಕಾರದಿಂದ ಪ್ರೊಡಕ್ಷನ್ ಸಂಬಂಧಿತ ನೆರವು ನೀಡಲಾಗುತ್ತಿದೆ ಎಂದು ಗುರ್ಜರ್ ಹೇಳಿದರು. ಎರಡೂ ಯೋಜನೆಗಳು ದೇಶೀಯ ಮತ್ತು ವಿದೇಶಿ ಘಟಕಗಳಿಗೆ ಮುಕ್ತವಾಗಿವೆ.

ಟೆಸ್ಲಾ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಕಂಪನಿಯು ಚೀನಾದ ಕಾರ್ಮಿಕರು ಮತ್ತು ಭಾರತದ ಮಾರುಕಟ್ಟೆ ಬಯಸುತ್ತಿದೆ. ಇದು ಮೋದಿ ನೇತೃತ್ವದಲ್ಲಿ ಸರ್ಕಾರದಲ್ಲಿ ಸಾಧ್ಯವಿಲ್ಲ... ನಮ್ಮ ಸರ್ಕಾರದ ನೀತಿಯೆಂದರೆ ಭಾರತದ ಮಾರುಕಟ್ಟೆಯನ್ನು ಬಳಸಬೇಕಾದರೆ ಉದ್ಯೋಗಾವಕಾಶಗಳು ಸೃಷ್ಟಿಯಾಗಬೇಕಾಗುತ್ತದೆ. ಭಾರತೀಯರಿಗೇ ಉದ್ಯೋಗ ನೀಡಬೇಕಾಗುತ್ತದೆ ಎಂದು ಹೇಳಿದರು.

ಟೆಸ್ಲಾವನ್ನು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲು ಸರ್ಕಾರ ಆಹ್ವಾನಿಸುತ್ತದೆಯೇ ಮತ್ತು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೃಹತ್ ಉತ್ಪಾದನೆಯನ್ನು ಉತ್ತೇಜಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಕುರಿತು ಕಾಂಗ್ರೆಸ್ ಸದಸ್ಯ ಕೆ ಸುರೇಶ್ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

'ಭಾರತದ ಹಣವನ್ನು ಚೀನಾಕ್ಕೆ ಹೋಗಲು ಈವು ಬಯಸುತ್ತೀರೆ? ಎಂದು ಸದಸ್ಯರನ್ನು ಕೇಳಲು ಬಯಸುತ್ತೇನೆ. ಆ ಕಂಪನಿಯು ನಮ್ಮ ನೀತಿಗೆ ಅನುಗುಣವಾಗಿ ಅರ್ಜಿ ಸಲ್ಲಿಸಿಲ್ಲ. ಆ ಕಂಪನಿಗೆ ಭಾರತದ ಬಾಗಿಲು ತೆರೆದಿದೆ, ಅವರು ನಮ್ಮ ನೀತಿಯ ಪ್ರಕಾರ ಅರ್ಜಿ ಸಲ್ಲಿಸಬಹುದು, ಕಂಪನಿಯನ್ನು ಸ್ಥಾಪಿಸಬಹುದು, ನಮ್ಮ ಜನರಿಗೆ ಉದ್ಯೋಗ ನೀಡಿ, ಸರ್ಕಾರದ ಆದಾಯವನ್ನು ಹೆಚ್ಚಿಸಬೇಕು’ ಎಂದು ಸಚಿವರು ಹೇಳಿದರು.

ಕಳೆದ ತಿಂಗಳು, ಟೆಸ್ಲಾ ಸಂಸ್ಥಾಪಕ ಮತ್ತು ಸಿಇಒ ಎಲೋನ್ ಮಸ್ಕ್ ಅವರು ಭಾರತದಲ್ಲಿ ತನ್ನ ಉತ್ಪನ್ನಗಳನ್ನು ಪ್ರಾರಂಭಿಸಲು ಕಂಪನಿಯು ಸರ್ಕಾರದೊಂದಿಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.