ADVERTISEMENT

ತೆಲಂಗಾಣ ಮುಖ್ಯಮಂತ್ರಿ ಮಗಳ ವಿರುದ್ಧ 180ಕ್ಕೂ ಹೆಚ್ಚು ಅಭ್ಯರ್ಥಿಗಳು!

ರೈತರಿಂದ ವಿಭಿನ್ನ ಪ್ರತಿಭಟನೆ

ಪಿಟಿಐ
Published 29 ಮಾರ್ಚ್ 2019, 9:23 IST
Last Updated 29 ಮಾರ್ಚ್ 2019, 9:23 IST
ಕೆ.ಕವಿತಾ
ಕೆ.ಕವಿತಾ   

ಹೈದರಾಬಾದ್:ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಮಗಳು ಕೆ.ಕವಿತಾ ಸ್ಪರ್ಧಿಸುತ್ತಿರುವ ನಿಜಾಮಾಬಾದ್‌ ಕ್ಷೇತ್ರದಲ್ಲಿ ಈ ಬಾರಿ ಒಟ್ಟು 185 ಅಭ್ಯರ್ಥಿಗಳಿದ್ದಾರೆ! ಈ ಪೈಕಿ 170 ಮಂದಿ ರೈತರು.

17 ಲೋಕಸಭಾ ಕ್ಷೇತ್ರಗಳಿರುವ ತೆಲಂಗಾಣದಲ್ಲಿ ಏಪ್ರಿಲ್ 11ರಂದು ಲೋಕಸಭೆ ಚುನಾವಣೆನಡೆಯಲಿದೆ. ಹಾಲಿ ಸಂಸದೆಯಾಗಿರುವ ಕವಿತಾ ಎರಡನೇ ಬಾರಿ ಕಣಕ್ಕಿಳಿದಿದ್ದಾರೆ.ಜೋಳ ಮತ್ತು ಅರಶಿನ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವಲ್ಲಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ವಿಫಲವಾಗಿದೆ ಎಂದು ಆರೋಪಿಸಿರುವ ರೈತರು ಪ್ರತಿಭಟನಾರ್ಥ ನಾಮಪತ್ರ ಸಲ್ಲಿಸಿದ್ದಾರೆ. ಅರಶಿನ ಮಂಡಳಿ ನಿರ್ಮಿಸುವಂತೆಯೂ ರೈತರು ಸರ್ಕಾರಕ್ಕೆ ಬೇಡಿಕೆ ಇಟ್ಟಿದ್ದು, ಇದೂ ನೆರವೇರಿಲ್ಲ ಎನ್ನಲಾಗಿದೆ.

200ಕ್ಕೂ ಹೆಚ್ಚು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಗುರುವಾರ ಕೊನೆಯ ದಿನವಾಗಿದ್ದು ರಾಜ್ಯದಲ್ಲಿ ಸದ್ಯ ಒಟ್ಟು 443 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ನಿಜಾಮಾಬಾದ್‌ನಲ್ಲಿ 185 ಅಭ್ಯರ್ಥಿಗಳಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಮತಪತ್ರದ ಮೂಲಕ ಚುನಾವಣೆ:‘ನಿಜಾಮಾಬಾದ್‌ನಲ್ಲಿ ಮತಪತ್ರದ ಮೂಲಕ ಚುನಾವಣೆ ನಡೆಸಬೇಕಿದೆ. ಈ ವಿಚಾರವನ್ನು ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಲಾಗುತ್ತಿದೆ. ಯಾವ ರೀತಿಯ ಮತಪತ್ರ ಬಳಸಬೇಕು, ಯಾವ ಚಿಹ್ನೆಗಳನ್ನು ನೀಡಬೇಕು ಎಂಬ ಬಗ್ಗೆಕೇಂದ್ರ ಚುನಾವಣಾ ಆಯೋಗ ಮಾರ್ಗದರ್ಶನ ನೀಡಲಿದೆ’ ಎಂದು ತೆಲಂಗಾಣದ ಮುಖ್ಯ ಚುನಾವಣಾಧಿಕಾರಿ ರಜತ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.