ಮುಂಬೈ: ‘ದಿಢೀರ್ನೆ ಲಾಕ್ಡೌನ್ ಹೇರಿದ್ದು ತಪ್ಪು. ಅದೇ ರೀತಿ ಈಗ ಅದನ್ನು ತೆರವುಗೊಳಿಸುವುದಕ್ಕೂ ಆಗುವುದಿಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಹೇಳಿದ್ದಾರೆ.
‘ಒಮ್ಮೆಲೇ ಲಾಕ್ಡೌನ್ ಜಾರಿಗೊಳಿಸುವುದು, ತಕ್ಷಣವೇ ತೆರವುಗೊಳಿಸುವುದರಿಂದ ಅಂತಿಮವಾಗಿ ಜನರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ’ ಎಂದು ಅವರು ಟಿ.ವಿ ಮೂಲಕ ರಾಜ್ಯವನ್ನು ಉದ್ದೇಶಿಸಿ ಹೇಳಿದರು.
‘ರಾಜ್ಯದಲ್ಲಿ ಕೋವಿಡ್–19 ಪ್ರಕರಣಗಳು ಹೆಚ್ಚುತ್ತಲೇ ಇವೆ. ಹಾಗಾಗಿ, ಮುಂದಿನ ತಿಂಗಳು ಮುಂಗಾರು ಆರಂಭವಾಗಲಿರುವ ಕಾರಣ ಜನರು ಮತ್ತಷ್ಟೂ ಮುನ್ನೆಚ್ಚರಿಕೆ ವಹಿಸಬೇಕು’ ಎಂದೂ ಅವರು ಮನವಿ ಮಾಡಿದರು.
‘ಜಿಎಸ್ಟಿಗೆ ಸಂಬಂಧಿಸಿ ರಾಜ್ಯದ ಪಾಲು ಇನ್ನೂ ಪಾವತಿಯಾಗಿಲ್ಲ. ವಲಸೆ ಕಾರ್ಮಿಕರನ್ನು ರೈಲುಗಳ ಮೂಲಕ ಅವರ ತವರು ರಾಜ್ಯಗಳಿಗೆ ಕಳುಹಿಸಿದ್ದಕ್ಕೆ ತಗುಲಿದ ವೆಚ್ಚದ ಪೈಕಿ ಕೇಂದ್ರದ ಪಾಲು ಸಹ ಬಂದಿಲ್ಲ. ಕೆಲ ದಿನಗಳ ವರೆಗೆ ಪಿಪಿಇ ಕಿಟ್ ಹಾಗೂ ಇತರ ವೈದ್ಯಕೀಯ ಉಪಕರಣಗಳ ಕೊರತೆ ಇತ್ತು. ಈಗ ಔಷಧಿಗಳ ಕೊರತೆ’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.