ಕೋಲ್ಕತ್ತ: ಉತ್ತರ 24 ಪರಗಣ ಜಿಲ್ಲೆಯಲ್ಲಿ ಆಯೋಜಿಸಿದ್ದ ಟಿಎಂಸಿ ರೋಡ್ಶೋ ದಿಂದ ಹಠಾತ್ತನೆ ಹೊರನಡೆಯುವ ಮೂಲಕ, ಟಿಎಂಸಿ ಸಂಸದೆ, ನಟಿ ನುಸ್ರತ್ ಜಹಾನ್ ಅವರು ವಿವಾದ ಸೃಷ್ಟಿಸಿದ್ದಾರೆ.
ಮುಖ್ಯಮಂತ್ರಿಯ ರೋಡ್ ಶೋ ಆಗಿದ್ದರೂ ಸರಿ, ಒಂದು ಗಂಟೆಗೂ ಹೆಚ್ಚು ಕಾಲ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿ ಅವರು ಹೊರನಡೆದಿದ್ದಾರೆ ಎನ್ನಲಾಗಿದೆ.
ಟಿಎಂಸಿ ಅಭ್ಯರ್ಥಿ ನಾರಾಯಣ ಗೋಸ್ವಾಮಿ ಅವರ ಪರ ಪ್ರಚಾರ ರ್ಯಾಲಿಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಇದರಲ್ಲಿ ನುಸ್ರತ್ ಅವರು ಪಾಲ್ಗೊಂಡಿದ್ದರು. ರ್ಯಾಲಿಯು ತುಂಬ ಹೊತ್ತು ನಡೆಯಿತು. ಇನ್ನೂ ಸ್ವಲ್ಪ ಹೊತ್ತು ಇರುವಂತೆ ಪಕ್ಷದ ಕಾರ್ಯಕರ್ತರು ನುಸ್ರತ್ ಅವರಲ್ಲಿ ಮನವಿ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ಸಿಟ್ಟಿಗೆದ್ದ ಅವರು, ‘ನೀವೇನು ತಮಾಷೆ ಮಾಡುತ್ತಿದ್ದೀರಾ? ಒಂದು ಗಂಟೆಗೂ ಹೆಚ್ಚು ಕಾಲದಿಂದ ನಾನಿಲ್ಲಿದ್ದೇನೆ, ಮುಖ್ಯಮಂತ್ರಿ ಕಾರ್ಯಕ್ರಮದಲ್ಲೂ ನಾನು ಇಷ್ಟು ಹೊತ್ತು ಪಾಲ್ಗೊಳ್ಳುವುದಿಲ್ಲ’ ಎಂದು ಅವರು ಹೇಳಿರುವುದು ವಿಡಿಯೊದಲ್ಲಿ ದಾಖಲಾಗಿದೆ.
‘ನುಸ್ರತ್ ಅವರಿಗೆ ಕಾಲಿನಲ್ಲಿ ಉಳುಕು ಕಾಣಿಸಿದ್ದರಿಂದ ಅವರು ರೋಡ್ ಶೋದಿಂದ ಹೋಗಿದ್ದರು’ ಎಂದು ಗೋಸ್ವಾಮಿ ಅವರು ಆನಂತರ ಹೇಳಿದ್ದರು.
ಆದರೆ, ಈ ಸಂಭಾಷಣೆಯ ವಿಡಿಯೊವನ್ನು ಬಳಸಿಕೊಂಡಿರುವ ಬಿಜೆಪಿಯು ಟ್ವಿಟರ್ನಲ್ಲಿ #MamataLosingNandigram ಹ್ಯಾಷ್ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.