ADVERTISEMENT

ಶಿಕ್ಷಕರ ನೇಮಕಾತಿ ಹಗರಣ: ₹20 ಕೋಟಿ ಪಾರ್ಥ ಚಟರ್ಜಿಗೆ ಸೇರಿದ್ದೆಂದ ಅರ್ಪಿತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2022, 16:26 IST
Last Updated 25 ಜುಲೈ 2022, 16:26 IST
ಪಾರ್ಥ ಚಟರ್ಜಿ
ಪಾರ್ಥ ಚಟರ್ಜಿ   

ಕೋಲ್ಕತ್ತ: ತಮ್ಮ ಮನೆಯಿಂದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ವಶಪಡಿಸಿಕೊಂಡಿರುವ ನಗದು ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರಿಗೆ ಸೇರಿದ್ದು ಎಂದು ಅವರ ಆಪ್ತೆ, ನಟಿ ಅರ್ಪಿತಾ ಮುಖರ್ಜಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಜುಲೈ 22ರಂದು ಪಶ್ಚಿಮ ಬಂಗಾಳದ ಹಲವೆಡೆ ಶೋಧ ನಡೆಸಿದ್ದ ಇ.ಡಿ. ಅಧಿಕಾರಿಗಳು ಪಾರ್ಥ ಚಟರ್ಜಿ ಹಾಗೂ ಅರ್ಪಿತಾ ಮುಖರ್ಜಿ ಅವರನ್ನು ಬಂಧಿಸಿದ್ದರು. ಅರ್ಪಿತಾ ಮುಖರ್ಜಿ ಮನೆಯಿಂದ ಅಧಿಕಾರಿಗಳು ₹20 ಕೋಟಿ ನಗದನ್ನು ವಶಕ್ಕೆ ಪಡೆದಿದ್ದರು.

ಜಾರಿ ನಿರ್ದೇಶನಾಲಯ ಅಧಿಕಾರಿಗಳ ಬಳಿ ತಪ್ಪೊಪ್ಪಿಕೊಂಡಿರುವ ಅರ್ಪಿತಾ ಮುಖರ್ಜಿ, ತಮ್ಮ ಮನೆಯಲ್ಲಿ ದೊರೆತ ಹಣ ಪಾರ್ಥ ಚಟರ್ಜಿಗೆ ಸೇರಿದ್ದು ಎಂದು ಹೇಳಿರುವುದಾಗಿ ‘ಇಂಡಿಯಾ ಟುಡೆ’ ವರದಿ ಮಾಡಿದೆ.

ಒಂದು ಅಥವಾ ಎರಡು ದಿನಗಳಲ್ಲಿ ತಮ್ಮ ಮನೆಯಿಂದ ಹಣವನ್ನು ಸಾಗಿಸುವುದು ಎಂದು ನಿರ್ಧರಿಸಲಾಗಿತ್ತು. ಆದೆ ಇ.ಡಿ. ದಾಳಿಯಿಂದ ಸಂಚು ವಿಫಲವಾಯಿತು ಎಂದು ಅವರು ತನಿಖೆ ವೇಳೆ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಅರ್ಪಿತಾ ಮುಖರ್ಜಿ ಹಾಗೂ ಪಾರ್ಥ ಚಟರ್ಜಿ ಜಂಟಿಯಾಗಿ ಆಸ್ತಿ ಹೊಂದಿದ್ದಾರೆ ಎಂದು ದಾಖಲೆಗಳನ್ನು ಉಲ್ಲೇಖಿಸಿ ಇ.ಡಿ ಮಾಹಿತಿ ನೀಡಿರುವುದಾಗಿಯೂ ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.