ADVERTISEMENT

ನಾರದ ಪ್ರಕರಣ: ತೃಣಮೂಲ ಸಚಿವ ಸಹಿತ 4 ಮುಖಂಡರು ಸಿಬಿಐ ಬಲೆಗೆ

​ಪ್ರಜಾವಾಣಿ ವಾರ್ತೆ
Published 17 ಮೇ 2021, 6:10 IST
Last Updated 17 ಮೇ 2021, 6:10 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತ: ನಾರದಾ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಮೂವರು ಹಿರಿಯ ನಾಯಕರು ಮತ್ತು ಸಚಿವರನ್ನು ಸಿಬಿಐ ಸೋಮವಾರ ಬೆಳಿಗ್ಗೆ ಬಂಧಿಸಿದೆ.

ಸಾರಿಗೆ ಸಚಿವ ಫಿರ್ಹಾದ್‌ ಹಕೀಮ್‌, ಪಂಚಾಯತ್‌ ಸಚಿವ ಸುಬ್ರತಾ ಮುಖರ್ಜಿ, ಶಾಸಕ ಮದನ್‌ ಮಿತ್ರಾ ಮತ್ತು ಟಿಎಂಸಿಯ ಮಾಜಿ ಮುಖಂಡ ಸೋವನ್‌ ಚಟರ್ಜಿ ಅವರನ್ನು ಬಂಧಿಸಲಾಗಿದೆ ಎಂದು ಸಿಬಿಐ ಮೂಲಗಳು ‘ಪ್ರಜಾವಾಣಿ‘ಗೆ ಹೇಳಿವೆ.

ಸೋಮವಾರ ಬೆಳಿಗ್ಗೆ ಹಕೀಮ್‌, ಮುಖರ್ಜಿ, ಮಿತ್ರಾ ಮತ್ತು ಚಟರ್ಜಿ ಅವರನ್ನು ಅವರವರ ನಿವಾಸದಿಂದ ಸಿಬಿಐ ವಶಕ್ಕೆ ಪಡೆದುಕೊಂಡಿತು. ನಂತರ ನಿಜಾಂ ಪ್ಯಾಲೇಜನಲ್ಲಿರುವ ಸಿಬಿಐ ಕಚೇರಿಗೆ ಕರೆತರಲಾಯಿತು. ಈ ವೇಳೆ ಹಕೀಮ್‌ ಅವರು, ನಾರದಾ ಮಾರುವೇಷ ಕಾರ್ಯಾಚರಣೆ ಪ್ರಕರಣದಲ್ಲಿ ತಮ್ಮನ್ನು ಬಂಧಿಸಲಾಗಿದೆ ಎಂದು ಹಕೀಮ್‌ ಹೇಳಿದರು.

ADVERTISEMENT

ನಾಟಕೀಯ ಬೆಳವಣಿಗೆಯಲ್ಲಿ ಕೇಂದ್ರೀಯ ಪಡೆಗಳ ಸಿಬ್ಬಂದಿ ಹಕೀಮ್‌ ಅವರನಿವಾಸವನ್ನು ಸುತ್ತುವರೆದರು. ‘ಯಾವುದೇ ಸೂಚನೆ ನೀಡದೆ ತಮ್ಮನ್ನು ಬಂಧಿಸಲಾಗುತ್ತಿದೆ’ ಎಂದು ಹಕೀಮ್‌ ಆರೋಪಿಸಿದರು.

ಈ ಸಂದರ್ಭದಲ್ಲಿ ಹಕೀಮ್‌ ಅವರ ನಿವಾಸದ ಮುಂದೆ ಟಿಎಂಸಿಯ ಅನೇಕ ಕಾರ್ಯಕರ್ತರು ಸೇರಿದ್ದು ಪ್ರತಿಭಟನೆ ನಡೆಸಿದರು. ಸ್ಥಳದಲ್ಲಿ ಉದ್ರಿಕ್ತ ವಾತಾವರಣ ಇತ್ತು.

ನಾಲ್ವರ ವಿರುದ್ಧ ಸದ್ಯವೇ ದೋಷಾರೋಪ ಪಟ್ಟಿ ಸಲ್ಲಿಸುವ ಸಾಧ್ಯತೆ ಇದೆ ಸಿಬಿಐ ಮೂಲಗಳು ಹೇಳಿವೆ.

ಫಿರ್ಹಾದ್‌ ಹಕೀಮ್‌, ಸುಬ್ರತಾ ಮುಖರ್ಜಿ, ಮದನ್‌ ಮಿತ್ರಾ ಮತ್ತು ಸೋವನ್‌ ಚಟರ್ಜಿ ಅವರ ವಿರುದ್ಧ ತನಿಖೆಗೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್‌ ಧನಕರ್‌ ಸಮ್ಮತಿ ನೀಡಿದ ಕೆಲ ದಿನಗಳ ನಂತರ ಈ ಬೆಳವಣಿಗೆಗಳು ನಡೆದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.