ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಆಪ್ತ ಹಾಗೂ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿಯವರ ಸಂಬಂಧಿ ಕೋಲ್ಕತ್ತಾ ಮೂಲದ ಉದ್ಯಮಿ ಬಿನಯ್ ಮಿಶ್ರಾ ಅವರ ವಿರುದ್ಧ ಜಾನುವಾರು ಕಳ್ಳಸಾಗಣೆ ಪ್ರಕರಣದಡಿ ಸಿಬಿಐ ಪೂರಕ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಅಸನ್ಸೊಲ್ನ ಸಿಬಿಐ ನ್ಯಾಯಾಲಯದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಆರೋಪಿ ಮಿಶ್ರ ತಲೆಮರೆಸಿ ಕೊಂಡಿದ್ದಾನೆಂದು ಸಿಬಿಐ ಉಲ್ಲೇಖಿಸಿದೆ.
ಜಾನುವಾರು ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗಿದ್ದಕ್ಕಾಗಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಾರ್ಯಾಚರಣೆಯದಲ್ಲಿದ್ದ ಬಿಎಸ್ಎಫ್ ಕಮಾಂಡೆಂಟ್ ಸತೀಶ್ ಕುಮಾರ್ ಮತ್ತು ಇತರ ಆರು ಜನರ ವಿರುದ್ಧ ಸಿಬಿಐ ಫೆಬ್ರವರಿ 18 ರಂದು ಚಾರ್ಜ್ಶೀಟ್ ಸಲ್ಲಿಸಿತ್ತು. ಸಿಬಿಐ ಈ ಪ್ರಕರಣವನ್ನು ಕಳೆದ ವರ್ಷ ಸೆಪ್ಟೆಂಬರ್ 21ರಂದು ಕೈಗೆತ್ತಿಕೊಂಡಿತ್ತು.
ಈಸ್ಟರ್ ಕೋಲ್ಫೀಲ್ಡ್ಸ್ ಲಿಮಿಟೆಡ್ ಗಣಿಗಳಿಂದ ಅಕ್ರಮ ಕಲ್ಲಿದ್ದಲು ಗಣಿಗಾರಿಕೆ ಮತ್ತು ದರೋಡೆಕೋರರಿಗೆ ಸಂಬಂಧಿಸಿದ ಪ್ರತ್ಯೇಕ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆ ಇತ್ತೀಚೆಗೆ ಬ್ಯಾನರ್ಜಿ ಅವರ ಪತ್ನಿ ರುಜೀರಾ ಮತ್ತು ಅತ್ತಿಗೆ ಮೇನಕಾ ಗಂಭೀರ್ ಅವರನ್ನು ಪ್ರಶ್ನಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.