ನವದೆಹಲಿ: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಅಲಹಾಬಾದ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲು ಸಿಬಿಐಗೆ ಅನುಮತಿ ನೀಡಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಶುಕ್ಲಾ ಅವರು ಖಾಸಗಿ ಮೆಡಿಕಲ್ ಕಾಲೇಜೊಂದಕ್ಕೆ ಅನುಕೂಲವಾಗುವ ರೀತಿಯಲ್ಲಿ ಆದೇಶ ಹೊರಡಿಸಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ನಡೆಸಲು ಅನುಮತಿ ನೀಡುವಂತೆ ಕೋರಿ ಸಿಬಿಐ ಕಳೆದ ಏಪ್ರಿಲ್ 16ರಂದು ಅರ್ಜಿ ಸಲ್ಲಿಸಿತ್ತು. ಈಗ ಅಲಹಾಬಾದ್ ಹೈಕೋರ್ಟ್ ಸಿಬಿಐಗೆ ಅನುಮತಿ ನೀಡಿದೆ.
ಈ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಎಫ್ಐಆರ್ ದಾಖಲಿಸಿದೆ. ನಿವೃತ್ತ ನ್ಯಾಯಮೂರ್ತಿ ಶುಕ್ಲಾ ಅವರಲ್ಲದೇ, ಛತ್ತೀಸಗಡ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಐ.ಎಂ.ಕುದ್ದುಸಿ, ಪ್ರಸಾದ್ ಎಜುಕೇಷನ್ ಟ್ರಸ್ಟ್ನ ಭಗವಾನ್ ಪ್ರಸಾದ್ ಯಾದವ್, ಪಲಾಶ್ ಯಾದವ್, ಖಾಸಗಿ ವ್ಯಕ್ತಿಗಳಾದ ಭಾವನಾ ಪಾಂಡೆ, ಸುಧೀರ್ ಗಿರಿ ಎಂಬುವವರ ಹೆಸರನ್ನು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಲಖನೌ, ಮೀರತ್ ಹಾಗೂ ದೆಹಲಿಯಲ್ಲಿನ ವಿವಿಧ ಸ್ಥಳಗಳ ಮೇಲೆ ಸಿಬಿಐ ಶೋಧ ನಡೆಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.