
ತಿರುವನಂತಪುರ: ಪುನರ್ವಸತಿ ಯೋಜನೆಗೆ ವಿದೇಶದಿಂದ ನಿಧಿ ಸಂಗ್ರಹಿಸುವಲ್ಲಿ ಅವ್ಯವಹಾರ ನಡೆಸಿದ ಆರೋಪದಲ್ಲಿ ಕೇರಳ ವಿಧಾನಸಭೆ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ವಿರುದ್ಧ ಸಿಬಿಐ ತನಿಖೆಗೆ ಕೇರಳ ಜಾಗೃತ ಹಾಗೂ ಭ್ರಷ್ಟಾಚಾರ ನಿಗ್ರಹ ದಳ (ವಿಎಸಿಬಿ) ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಿಬಿಐ ತನಿಖೆಗೆ ಶಿಫಾರಸು ಒಳಗೊಂಡಿರುವ ವರದಿಯನ್ನು ಪಿಣರಾಯಿ ವಿಜಯನ್ ಅವರಿಗೆ ವಿಎಸಿಬಿ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.
ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್ ಸಿಆರ್ ಎ) ಕಾಯ್ದೆ ಉಲ್ಲಂಘನೆಯಾಗಿದ್ದು, ಹೀಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ವಿಎಸಿಬಿ ಶಿಫಾರಸು ಮಾಡಿದೆ.
ಖಾಸಗಿ ಭೇಟಿಗೆಂದು ಕೇಂದ್ರ ಸರ್ಕಾರದ ಅನುಮತಿ ಪಡೆದು ವಿದೇಶಕ್ಕೆ ಪ್ರಯಾಣಿಸಿದ್ದ ಸತೀಶನ್, ಅಲ್ಲಿ ಹಣ ಸಂಗ್ರಹಿಸಿ ಕೇರಳ ಖಾತೆಗೆ ವರ್ಗಾವಣೆ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಎಫ್ ಸಿ ಆರ್ ಎ ಕಾಯ್ದೆ-2010ರ ಸೆಕ್ಷನ್ 3(2)(a) ಅಡಿ (ಭಾರತದಲ್ಲಿ ವಾಸಿಸುವ ಯಾವುದೇ ವ್ಯಕ್ತಿ ಅಥವಾ ವಿದೇಶದಲ್ಲಿ ವಾಸಿಸುವ ಯಾವುದೇ ಭಾರತೀಯ ನಾಗರಿಕರು ರಾಜಕೀಯ ಪಕ್ಷದ ಪರವಾಗಿ ವಿದೇಶಿ ದೇಣಿಗೆಗಳನ್ನು ಸ್ವೀಕರಿಸುವುದನ್ನು ನಿಷೇಧಿಸುತ್ತದೆ) ಸಿಬಿಐ ತನಿಖೆಗೆ ವರದಿ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಈ ಬಗ್ಗೆ ವಯನಾಡ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಇದನ್ನು ರಾಜಕೀಯವಾಗಿಯೂ, ವೈಯಕ್ತಿಕವಾಗಿಯೂ ಎದುರಿಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.