ADVERTISEMENT

ಲಂಚ: ಬಂಧಿತ ರೈಲ್ವೇ ಅಧಿಕಾರಿಯಿಂದ ₹1.38 ಕೋಟಿ ನಗದು ವಶಪಡಿಸಿಕೊಂಡ ಸಿಬಿಐ

ಪಿಟಿಐ
Published 9 ಡಿಸೆಂಬರ್ 2022, 2:09 IST
Last Updated 9 ಡಿಸೆಂಬರ್ 2022, 2:09 IST
   

ನವದೆಹಲಿ:ಲಂಚ ಪಡೆದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ಉತ್ತರ ರೈಲ್ವೆಯ ಉಪ ಮುಖ್ಯ ಅಧಿಕಾರಿ ಅರುಣ್‌ ಕುಮಾರ್‌ ಮಿತ್ತಲ್‌ ಅವರ ಮನೆಯಲ್ಲಿ ಸಿಬಿಐ ನಡೆಸಿದ ಶೋಧದ ವೇಳೆ ₹1.38 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಅರುಣ್‌ ಕುಮಾರ್‌ ಗುತ್ತಿಗೆದಾರರ ಬಳಿ ಲಂಚ ಪಡೆಯುವ ವೇಳೆ ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಖನೌನ ಚಾರ್‌ಭಾಗ್‌ನ ಯೋಜನೆಯೊಂದಕ್ಕೆ ಸಂಬಂಧಿಸಿದ ಬಿಲ್‌ ಪಾಸ್‌ ಮಾಡಲು ಗುತ್ತಿಗೆದಾರನ ಬಳಿ ಅಕ್ರಮವಾಗಿ ಹಣ ಪಡೆದ ಹಿನ್ನೆಲೆಯಲ್ಲಿ ಅರುಣ್‌ ಕುಮಾರ್‌ ಮಿತ್ತಲ್‌ ಅವರನ್ನು ಡಿ.1ರಂದು ಸಿಬಿಐ ಬಂಧಿಸಿದೆ.

ಅರುಣ್‌ ಕುಮಾರ್‌ ಅವರನ್ನು ಬಂಧಿಸಿದ ಬಳಿಕ, ಮನೆಯ ಮೇಲೆ ಸಿಬಿಐ ದಾಳಿ ನಡೆಸಿತ್ತು. ಮನೆಯಲ್ಲಿ ನಗದು ಹಣ ದೊರಕಿದ್ದು ಮಾತ್ರವಲ್ಲದೆ, ಅರುಣ್‌ ಕುಮಾರ್‌ ಮತ್ತು ಅವರ ಕುಟುಂಬದವರ ಬ್ಯಾಂಕ್‌ ಖಾತೆಯಲ್ಲಿ ₹1.13 ಕೋಟಿ ಹಣ ಇರುವುದು ಪತ್ತೆಯಾಗಿದೆ. ಬಂಧನದ ಬಳಿಕ ಒಟ್ಟು ₹1.38 ಕೋಟಿ 38 ಲಕ್ಷ ರೂಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಅಜೇನ್ಸಿಗಳು ಮತ್ತಷ್ಟು ತಪಾಸಣೆ ಮಾಡಿದ ವೇಳೆ ₹1 ಕೋಟಿ ನಗದು ದೊರಕಿದೆ. ಹೆಚ್ಚಿನ ಬಾರಿ ಹಣವನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿರುವುದು ಕಂಡುಬಂದಿದೆ. ಸುಮಾರು ₹11 ಲಕ್ಷ ಬೆಲೆಬಾಳುವ ಬಂಗಾರದ ಆಭರಣ, ರೈಲ್ವೆ ಇಲಾಖೆಯ ಗುತ್ತಿಗೆದಾರರೊಂದಿಗೆ ನಡೆಸಿದ ವ್ಯವಹಾರದ ದಾಖಲೆ ಸೇರಿದಂತೆ ವಿವಿಧ ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.