ನವದೆಹಲಿ: ಛತ್ತೀಸಗಢದ ಲೋಕಸೇವಾ ಆಯೋಗದಲ್ಲಿ ನಡೆದಿದೆ ಎನ್ನಲಾದ ಹಗರಣದ ಕುರಿತ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
2020–22ರಲ್ಲಿ ಛತ್ತೀಸಗಢ ಲೋಕಸೇವಾ ಆಯೋಗದ ಆಗಿನ ಅಧ್ಯಕ್ಷ, ಅಧಿಕಾರಿಗಳು ಮತ್ತು ರಾಜಕೀಯ ಮುಖಂಡರ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ಜಿಲ್ಲಾ ಕಚೇರಿಗಳಲ್ಲಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂಬ ಗಂಭೀರ ಸ್ವರೂಪದ ಆರೋಪವಿದೆ.
ರಾಯಪುರ ಮತ್ತು ಭಿಲಾಯ್ನಲ್ಲಿರುವ ಟಾಮನ್ ಸಿಂಗ್, ಕಾರ್ಯದರ್ಶಿ ಧ್ರುವ್ ಸೇರಿದಂತೆ ಇತರರ ನಿವಾಸಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ, ತಮ್ಮ ಮಕ್ಕಳು, ಮಗಳು ಮತ್ತು ಸಂಬಂಧಿಕರನ್ನು ಜಿಲ್ಲಾಧಿಕಾರಿ, ಡೆಪ್ಯುಟಿ ಎಸ್ಪಿ ಸೇರಿದಂತೆ ಪ್ರಮುಖ ಹುದ್ದೆಗಳಲ್ಲಿ ನೇಮಕ ಮಾಡಿಕೊಳ್ಳಲು ಸ್ವಜನ ಪಕ್ಷಪಾತ ಅನುಸರಿಸಿದ ಆರೋಪದ ಮೇರೆಗೆ ಸಿಜಿಪಿಎಸ್ಸಿಯ ಆಗಿನ ಅಧ್ಯಕ್ಷ ಟಾಮನ್ ಸಿಂಗ್ ಸೋನವಾನಿ, ಕಾರ್ಯದರ್ಶಿ ಜೆ.ಕೆ. ಧ್ರುವ್ ಮತ್ತು ಇತರರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಸೋನವಾನಿ ಅವರ ಪುತ್ರ ನಿತೇಶ್ ಜಿಲ್ಲಾಧಿಕಾರಿಯಾಗಿ, ಅವರ ಹಿರಿಯ ಸಹೋದರನ ಮಗ ಸಾಹಿಲ್ ಅವರನ್ನು ಡೆಪ್ಯುಟಿ ಎಸ್ಪಿ ಆಗಿ, ತಂಗಿಯ ಮಗಳು ಸುನೀತಾ ಜೋಶಿ ಅವರನ್ನು ಕಾರ್ಮಿಕ ಅಧಿಕಾರಿ, ಮಗನ ಪತ್ನಿ ನಿಶಾ ಕೋಸಲೆ ಅವರನ್ನು ಜಿಲ್ಲಾಧಿಕಾರಿಯಾಗಿ ಮತ್ತು ತಮ್ಮನ ಸೊಸೆ ದೀಪಾ ಅದಿಲ್ ಅವರನ್ನು ಜಿಲ್ಲಾ ಅಬಕಾರಿ ಅಧಿಕಾರಿಯನ್ನಾಗಿ ನೇಮಿಸಿಕೊಳ್ಳಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.