ನವದೆಹಲಿ: ಹಾಥರಸ್ನಲ್ಲಿ ದಲಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಕೃತ್ಯ ನಡೆದಿದ್ದ ಸ್ಥಳಕ್ಕೆ ಮಂಗಳವಾರ ಸಿಬಿಐ ತಂಡ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿತು.
ಸಂತ್ರಸ್ತೆಯ ಸಹೋದರನನ್ನು ಭೇಟಿ ಮಾಡಿದ್ದ ತಂಡ ಕೃತ್ಯ ನಡೆದ ಸ್ಥಳ ತೋರಿಸಲು ಸೂಚಿಸಿತು. ಅಲ್ಲದೆ, ಆ ಸ್ಥಳದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸ್ಥಳೀಯ ಪೊಲೀಸರಿಗೂ ಸೂಚಿಸಿತು. ನಾಲ್ವರ ತಂಡವು ಕೃತ್ಯ ಎಸಗಿದ ಒಂದು ತಿಂಗಳ ನಂತರ ತಂಡ ಭೇಟಿ ನೀಡಿದೆ.
ಅಪರಾಧದ ಕೃತ್ಯದ ಚಿತ್ರಣದ ಮರುಸೃಷ್ಟಿಗೆ ಅನುವಾಗುವಂತೆ ಕೇಂದ್ರ ತಂಡದ ಅಧಿಕಾರಿಗಳು ಕೇಂದ್ರ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಜೊತೆಗೆ ಮತ್ತೊಮ್ಮೆ ಭೇಟಿ ನೀಡುವ ಸಂಭವವಿದೆ.
ಸೆಪ್ಟೆಂಬರ್ 29ರಂದು ಕೃತ್ಯ ನಡೆದಿದ್ದು, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಮಹಿಳೆ ಬಳಿಕ ದೆಹಲಿಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದೇಶವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದು, ಉತ್ತರಪ್ರದೇಶ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.