ADVERTISEMENT

ಜಮ್ಮು & ಕಾಶ್ಮೀರ ಹಣಕಾಸು ಇಲಾಖೆ ನೇಮಕಾತಿ ಅಕ್ರಮ: 37 ಸ್ಥಳಗಳಲ್ಲಿ ಸಿಬಿಐ ಶೋಧ

ಪಿಟಿಐ
Published 3 ಫೆಬ್ರುವರಿ 2023, 11:09 IST
Last Updated 3 ಫೆಬ್ರುವರಿ 2023, 11:09 IST
   

ನವದೆಹಲಿ: ಕಳೆದ ವರ್ಷ ನಡೆದ ಜಮ್ಮು ಮತ್ತು ಕಾಶ್ಮೀರ ಸೇವೆಗಳ ಆಯ್ಕೆ ಮಂಡಳಿ (ಜೆಕೆಎಸ್‌ಎಸ್‌ಬಿ) ನಡೆಸಿದ್ದ ಹಣಕಾಸು ಇಲಾಖೆಯ ’ಸಹಾಯಕ ಲೆಕ್ಕಿಗ ನೇಮಕಾತಿ’ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಆರು ಜಿಲ್ಲೆಗಳ 37 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುವಿನ ಆರ್.ಎಸ್. ಪುರ, ಕರಣ್ ಬಾಂಗ್ ಮತ್ತು ಇತರ ಹಲವಾರು ಪ್ರದೇಶಗಳಲ್ಲಿ ಮಧ್ಯವರ್ತಿಗಳು ಮತ್ತು ಇತರ ಆರೋಪಿಗಳ ನಿವಾಸಗಳ ಮೇಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಉಧಂಪುರ, ರಾಜೌರಿ, ರಿಯಾಸಿ ಮತ್ತು ದೋಡಾ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳಿಗೆ ಸಹಾಯ ಮಾಡಿದ ಹಲವಾರು ದಲ್ಲಾಳಿಗಳ ನಿವಾಸಗಳ ಆವರಣದಲ್ಲೂ ಶೋಧ ಕಾರ್ಯ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜೆಕೆಎಸ್ಎಸ್‌ಬಿ ನಡೆಸಿದ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದ ಮೇಲೆ ಸಿಬಿಐ ಕಳೆದ ವರ್ಷ ನವೆಂಬರ್‌ನಲ್ಲಿ ಪ್ರಕರಣ ದಾಖಲಿಸಿತ್ತು.

ಜೆಕೆಎಸ್ಎಸ್‌ಬಿಯ ಮಾಜಿ ಸದಸ್ಯೆ ನೀಲಂ ಖಜುರಿಯಾ, ಸೆಕ್ಷನ್ ಆಫೀಸರ್ ಅಂಜು ರೈನಾ ಮತ್ತು ಬಿಎಸ್ಎಫ್ ಗಡಿನಾಡಿನ ಪ್ರಧಾನ ಕಚೇರಿಯ ವೈದ್ಯಕೀಯ ಅಧಿಕಾರಿಯಾಗಿದ್ದ ಕರ್ನೈಲ್ ಸಿಂಗ್ ಸೇರಿದಂತೆ 20 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

‘ಬೆಂಗಳೂರು ಮೂಲದ ಖಾಸಗಿ ಕಂಪನಿ, ಜೆಕೆಎಸ್‌ಎಸ್‌ಬಿ ಅಧಿಕಾರಿಗಳು, ಫಲಾನುಭವಿ ಅಭ್ಯರ್ಥಿಗಳು ಮತ್ತು ಇತರರ ನಡುವೆ ನಡೆದ ಪಿತೂರಿ ಬಗ್ಗೆ ಸರ್ಕಾರ ನೇಮಿಸಿದ್ದ ತನಿಖಾ ಸಮಿತಿಯ ವರದಿ ಬಹಿರಂಗಪಡಿಸಿದೆ’ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.