ನವದೆಹಲಿ: ಪವಿತ್ರ ಗಂಗಾ ಮತ್ತು ಅದರ ಉಪನದಿಗಳಲ್ಲಿ ಮೃತದೇಹಗಳನ್ನು ಎಸೆಯುವುದನ್ನು ತಡೆಗಟ್ಟುವಂತೆ ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಭಾನುವಾರ ನಿರ್ದೇಶನ ನೀಡಿದೆ.
ಕೊರೊನಾವೈರಸ್ ಪ್ರಕರಣಗಳು ಹೆಚ್ಚಿದಂತೆಮೃತದೇಹಗಳು ನದಿಗಳಲ್ಲಿ ತೇಲಿ ಬರುವುದು ವರದಿಯಾಗಿತ್ತು. ಈ ಕುರಿತಂತೆ ಮೃತದೇಹಗಳ ಗೌರವಯುತ ಅಂತ್ಯ ಸಂಸ್ಕಾರಕ್ಕೆ ಗಮನ ಕೇಂದ್ರಿಕರಿಸುವಂತೆ ಸೂಚಿಸಿದೆ.
ಮೇ 15 ಹಾಗೂ 16ರಂದು ನಡೆದ ಪರಿಶೀಲನಾ ಸಭೆಯಲ್ಲಿ ಗಂಗಾ ಮತ್ತು ಅದರ ಉಪನದಿಗಳಲ್ಲಿ ಮೃತದೇಹಗಳನ್ನು, ಭಾಗಶಃ ಸುಟ್ಟ ಅಥವಾ ಕೊಳೆತ ಶವಗಳನ್ನು ಎಸೆದಿರುವುದು ಇತ್ತೀಚೆಗೆ ವರದಿಯಾಗಿದೆ. ಇದು ಅನಪೇಕ್ಷಿತ ಹಾಗೂ ಆತಂಕಕಾರಿ ಬೆಳವಣಿಗೆ ಎಂದು ಕೇಂದ್ರವು ಹೇಳಿದೆ.
ಗಂಗಾ ನದಿಯಲ್ಲಿ ಮೃತದೇಹಗಳನ್ನು ಎಸೆಯುವುದನ್ನು ತಡೆಗಟ್ಟಲು ಮತ್ತು ಅವುಗಳ ಸುರಕ್ಷಿತ ಹಾಗೂ ಗೌರವಯುತ ಅಂತ್ಯಕ್ರಿಯೆಯನ್ನು ಖಚಿತಪಡಿಸಲು ಬೆಂಬಲ ನೀಡುವಂತೆ ರಾಜ್ಯಗಳಿಗೆ 'ನಮಾಮಿ ಗಂಗೆ' ನಿರ್ದೇಶನ ನೀಡುತ್ತಿದೆ ಎಂದು ಜಲಶಕ್ತಿ ಸಚಿವಾಲಯವು ತಿಳಿಸಿದೆ.
ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ನೀರಿನ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮೇಲ್ವಿಚಾರಣೆ ಹಾಗೂ ವಿಶ್ಲೇಷಣೆ ಮಾಡಲಿದ್ದು, ರಾಜ್ಯ ಮಾಲಿನ್ಯ ಮಂಡಳಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲಿದೆ.
ಅಂತ್ಯ ಸಂಸ್ಕಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಸರ್ಕಾರದ ಆದೇಶಗಳು ಪರಿಣಾಮಕಾರಿಯಾಗಿ ಅನುಷ್ಠಾನವಾಗುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಮಯವನ್ನು ವ್ಯರ್ಥ ಮಾಡಬಾರದು ಎಂದು ಸಚಿವಾಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.