ಚೆನ್ನೈ: ತಮ್ಮನ್ನು ಟೀಕಿಸಿದವರಿಗೆ ಮತ್ತು ‘ಅನಾಗರಿಕರು’ ಎಂದು ಕರೆದವರಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.
‘ಕೇಂದ್ರ ಸರ್ಕಾರ ತಮಿಳುನಾಡು ಮತ್ತು ಪೆರಿಯಾರ್ ಅವರನ್ನು ಅವಮಾನಿಸಿದೆ. ನಾವು ಅನಾಗರಿಕರೇ? ನಮ್ಮನ್ನು ಅನಾಗರಿಕರು ಎಂದು ಕರೆಯುವವರು ವಾಸ್ತವವಾಗಿ ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಮತ್ತು ನಮ್ಮ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಅವರಿಗೆ ತಮಿಳು ಜನರು ಶೀಘ್ರದಲ್ಲೇ ತಕ್ಕ ಉತ್ತರ ನೀಡುತ್ತಾರೆ’ಎಂದು ಉದಯನಿಧಿ ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಸಂಸತ್ತಿನಲ್ಲಿ ನೀಡಿದ ಹೇಳಿಕೆಗಳ ನಂತರ ಉದಯನಿಧಿ ಹೇಳಿಕೆ ಬಂದಿದೆ.
ಕೇಂದ್ರ ಸರ್ಕಾರ ತಮಿಳುನಾಡನ್ನು ಅವಮಾನಿಸಿದೆ ಎಂದು ಆರೋಪಿಸಿರುವ ಉದಯನಿಧಿ ಸ್ಟಾಲಿನ್, ನಮ್ನನ್ನು ‘ಅನಾಗರಿಕರು’ ಎಂದು ಕರೆಯುವವರು ವಾಸ್ತವವಾಗಿ ಅನಾಗರಿಕ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಂಗಳವಾರ ಸಂಸತ್ತಿನಲ್ಲಿ ಮಾತನಾಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷವು ತಮಿಳನ್ನು ‘ಅನಾಗರಿಕ’ಭಾಷೆ ಎಂದು ತಿರಸ್ಕರಿಸಿದ ವ್ಯಕ್ತಿಯನ್ನು ಪೂಜಿಸುತ್ತಿದೆ ಎಂದು ಆರೋಪಿಸಿದ್ದರು. ಆದರೆ, ಅವರು ಇ.ವಿ. ರಾಮಸಾಮಿ ಅಥವಾ ದ್ರಾವಿಡ ಚಳವಳಿಯ ಶಿಲ್ಪಿ ತಂತೈ ಪೆರಿಯಾರ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.
ತ್ರಿಭಾಷಾ ನೀತಿಯ ಕುರಿತು ಕೇಂದ್ರ ಮತ್ತು ತಮಿಳುನಾಡು ನಡುವಿನ ಜಟಾಪಟಿ ನಡುವೆ,ಸಚಿವ ಪಳನಿವೇಲ್ ತ್ಯಾಗರಾಜನ್ ಅವರು, ಕೇಂದ್ರದ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರುವುದು ಅಸಾಧ್ಯ. ಏಕೆಂದರೆ, ಅದನ್ನು ಬೆಂಬಲಿಸಲು ಯಾವುದೇ ಹಣಕಾಸು ಅಥವಾ ಮೂಲಸೌಕರ್ಯವಿಲ್ಲ ಎಂದು ಹೇಳಿದ್ದರು.
ಹೊಸ ಶಿಕ್ಷಣ ನೀತಿಯನ್ನು ಟೀಕಿಸಿದ್ದ ತ್ಯಾಗರಾಜನ್, ‘ಹೊಸ ಶಿಕ್ಷಣ ನೀತಿ 2020’ ಎಲ್ಕೆಜಿ ವಿದ್ಯಾರ್ಥಿ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗೆ ಒಂದೇ ರೀತಿಯಲ್ಲಿ ಕಲಿಸುವಂತೆ ಇದೆ ಎಂದು ಟೀಕಿಸಿದ್ದರು.
1968ರ ನಂತರ ಪರಿಚಯಿಸಲಾದ ಶಿಕ್ಷಣ ನೀತಿಗಳಲ್ಲಿ ದಕ್ಷಿಣ ಭಾರತದ ಭಾಷೆಗಳನ್ನು ಕಲಿಯಲು ಶಿಫಾರಸು ಇತ್ತು ಎಂದು ಅವರು ಹೇಳಿದ್ದಾರೆ. ಆದರೆ, ಅರ್ಹ ಶಿಕ್ಷಕರ ಕೊರತೆಯಿಂದಾಗಿ ಹಿಂದಿ ಮಾತನಾಡುವ ರಾಜ್ಯಗಳಲ್ಲಿ ಈ ನೀತಿ 20 ವರ್ಷಗಳಲ್ಲಿ ವಿಫಲವಾಯಿತು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.