ನವದೆಹಲಿ:ಪರಿಶಿಷ್ಟಜಾತಿಮತ್ತುಪರಿಶಿಷ್ಟಪಂಗಡಗಳ(ಎಸ್ಸಿ–ಎಸ್ಟಿ)ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನೀಡಿದ್ದ ಆದೇಶದ ಕುರಿತು ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.
‘2020 ಜನವರಿ 31ರವರೆಗೆ ಒಟ್ಟು 78 ಇಲಾಖೆಗಳ ಪೈಕಿ 23 ಇಲಾಖೆಗಳಲ್ಲಿ 1.3 ಲಕ್ಷಕ್ಕೂ ಅಧಿಕ ಉದ್ಯೋಗಿಗಳ ಬಡ್ತಿಗೆ ತಡೆಯಾಗಿದೆ. ಇದರಿಂದಾಗಿ ಉದ್ಯೋಗಿಗಳು ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ಅಸಮಾಧಾನಗೊಂಡಿದ್ದಾರೆ’ಎಂದು ಕೇಂದ್ರ ಉಲ್ಲೇಖಿಸಿದೆ.
‘ಈ ಪ್ರಕರಣದ ಅಂತಿಮ ತೀರ್ಪಿಗೆ ಅನುಗುಣವಾಗಿ, ಖಾಲಿ ಇರುವ ಹುದ್ದೆಗಳಿಗೆ ಅರ್ಹರನ್ನು ಬಡ್ತಿ ಮೂಲಕ ತುಂಬಿಸಲು ಅನುಮತಿ ನೀಡಬೇಕು’ ಎಂದು ಕೇಂದ್ರ ಸರ್ಕಾರ ಅರ್ಜಿಯಲ್ಲಿ ಮನವಿ ಮಾಡಿದೆ.
2019 ಏಪ್ರಿಲ್ 15ರಂದು ಬಡ್ತಿ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡಲು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಇದರಿಂದಾಗಿ ಮೀಸಲು ಹಾಗೂ ಸಾಮಾನ್ಯ ವಿಭಾಗದಲ್ಲಿ ಬಡ್ತಿ ಸಂಪೂರ್ಣವಾಗಿ ಸ್ಥಗಿತವಾಗಿದೆ.
‘ಪ್ರತಿ ತಿಂಗಳು ಹಲವು ಸರ್ಕಾರಿ ನೌಕರರು ಬಡ್ತಿ ಸಿಗದೇ ನಿವೃತ್ತಿ ಹೊಂದುತ್ತಿದ್ದಾರೆ. ಇದರಿಂದಾಗಿ ನೌಕರರಲ್ಲಿ ಗೊಂದಲ, ಅಸಮಾಧಾನ, ಸ್ಥೈರ್ಯ ಕುಗ್ಗಿದೆ. ಕೋವಿಡ್–19 ಪಿಡುಗಿನ ಈ ಸಂದರ್ಭದಲ್ಲಿ ಜನರ ಸೇವೆಯಲ್ಲಿ ಸರ್ಕಾರಿ ನೌಕರರು ಮುಂಚೂಣಿಯಲ್ಲಿದ್ದು, ಅವರ ಸ್ಥೈರ್ಯ ಹೆಚ್ಚಿಸುವುದು ಮುಖ್ಯ’ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.
‘ಇಲಾಖೆಗಳಲ್ಲಿ ಹಲವು ತಿಂಗಳಿಂದ ಹುದ್ದೆಗಳು ಖಾಲಿ ಇರುವುದು ಸರ್ಕಾರಗಳ ಕಾರ್ಯವೈಖರಿಯ ಮೇಲೂ ಪರಿಣಾಮ ಬೀರಲಿದೆ. ಇದರಿಂದ ಜನರಿಗೇ ಸಮಸ್ಯೆಯಾಗಲಿದೆ’ ಎಂದು ಕೇಂದ್ರ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.