ADVERTISEMENT

ಲಡಾಖ್ ಸಂಘರ್ಷ ಹಿನ್ನೆಲೆ: ಸೇನೆಯ ಸನ್ನದ್ಧತೆ ಪರಿಶೀಲಿಸಿದ ಕೇಂದ್ರ ಸರ್ಕಾರ

ಪಿಟಿಐ
Published 19 ಸೆಪ್ಟೆಂಬರ್ 2020, 5:17 IST
Last Updated 19 ಸೆಪ್ಟೆಂಬರ್ 2020, 5:17 IST
ಚೀನಾ ಗಡಿಯತ್ತ ಸೇನೆಯ ನಿಯೋಜನೆ (ಸಂಗ್ರಹ ಚಿತ್ರ)
ಚೀನಾ ಗಡಿಯತ್ತ ಸೇನೆಯ ನಿಯೋಜನೆ (ಸಂಗ್ರಹ ಚಿತ್ರ)   

ನವದೆಹಲಿ: ಪೂರ್ವ ಲಡಾಖ್‌ನ ಪರಿಸ್ಥಿತಿ ಮತ್ತು ಸೇನೆಯ ಕಾರ್ಯಾಚರಣೆ ಸನ್ನದ್ಧ ಸ್ಥಿತಿಯನ್ನು ಕೇಂದ್ರ ಸರ್ಕಾರವು ಶುಕ್ರವಾರ ಪರಿಶೀಲಿಸಿತು. ಭಾರತೀಯ ಸೇನೆಯನ್ನು ಮುಂಚೂಣಿ ನೆಲೆಗಳಿಂದ ಹಿಮ್ಮೆಟ್ಟಿಸುವ ಚೀನಾ ಸೇನೆಯ ಸತತ ಯತ್ನಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಸುಮಾರು ಮೂರು ತಾಸುಗಳ ನಡೆದ ಉನ್ನತಮಟ್ಟದ 'ಚೀನಾ ಸ್ಟಡಿ ಗ್ರೂಪ್‌' ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಬಾಲ್, ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.

ಅರುಣಚಲ ಪ್ರದೇಶ, ಸಿಕ್ಕಿಂ ವಲಯಗಳೂ ಸೇರಿದಂತೆ ಚೀನಾದೊಂದಿಗಿನ 3,500 ಕಿ.ಮೀ. ಉದ್ದದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಗಸ್ತು ಹೆಚ್ಚಿಸುವ ಸಾಧ್ಯತೆಯನ್ನು ಸಶಸ್ತ್ರ ಪಡೆಗಳ ಮುಖ್ಯಸ್ಥರು ಸಭೆಯಲ್ಲಿಪ್ರಸ್ತಾಪಿಸಿದರು ಎಂದು ತಿಳಿದುಬಂದಿದೆ.

ADVERTISEMENT

ಪಾಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡಗಳಲ್ಲಿಭಾರತ-ಚೀನಾ ಸೇನೆಗಳ ಮುಖಾಮುಖಿ ಕುರಿತುಭೂಸೇನಾ ಮುಖ್ಯಸ್ಥರಾದ ಜನರಲ್ ಎಂ.ಎಂ.ನರವಾಣೆ ಸಭೆಗೆ ವಿವರಣೆ ನೀಡಿದರು. ಚೀನಾ ಸೇನೆಯ ದುಸ್ಸಾಹಸ ತಡೆಯಲು ತೆಗೆದುಕೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.

'ಸಭೆಯಲ್ಲಿ ಚೀನಾ ಸ್ಟಡಿ ಗ್ರೂಪ್‌ ಎಲ್ಲ ಸಾಧ್ಯತೆಗಳನ್ನೂ ಪರಿಶೀಲಿಸಿತು' ಎಂದು ಮೂಲಗಳು ಹೇಳಿವೆ.

ಪೂರ್ವ ಲಡಾಖ್ ಸೇರಿದಂತೆ ಎಲ್ಲ ಅತಿಸೂಕ್ಷ್ಮ ಎತ್ತರದ ಪ್ರದೇಶಗಳಲ್ಲಿ ಚಳಿಗಾಲದಲ್ಲಿಯೂ ಸೇನಾ ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ಸುಸ್ಥಿತಿಯಲ್ಲಿನಿರ್ವಹಿಸುವ ವಿಚಾರವೂ ಸಭೆಯಲ್ಲಿ ಚರ್ಚೆಯಾಯಿತು. ಈ ಪ್ರದೇಶದಲ್ಲಿ ಚಳಿಗಾಲದಉಷ್ಣಾಂಶವು ಮೈನಸ್ 25 ಡಿಗ್ರಿಯಷ್ಟು ಕನಿಷ್ಠ ಮಟ್ಟಕ್ಕೆ ಕುಸಿಯಲಿದೆ.

ಭಾರತ-ಚೀನಾ ಸೇನಾಧಿಕಾರಿಗಳ ನಡುವೆ ಮುಂದಿನ ದಿನಗಳಲ್ಲಿ ನಡೆಯುವ ಸಭೆಗಳಲ್ಲಿ ಪ್ರಸ್ತಾಪವಾಗಬೇಕಾದ ವಿಷಯಗಳ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.