ADVERTISEMENT

ಲಡಾಖ್ ಸಂಘರ್ಷ: ಭಾರತದ ಒಂದಿಂಚು ಭೂಮಿಯನ್ನೂ ಯಾರೂ ವಶಪಡಿಸಲಾರರು ಎಂದ ಅಮಿತ್ ಶಾ

ಪಿಟಿಐ
Published 18 ಅಕ್ಟೋಬರ್ 2020, 3:10 IST
Last Updated 18 ಅಕ್ಟೋಬರ್ 2020, 3:10 IST
ಅಮಿತ್ ಶಾ
ಅಮಿತ್ ಶಾ   

ನವದೆಹಲಿ: ‘ದೇಶದ ಪ್ರತಿ ಇಂಚು ಭೂಮಿಗೆ ಭದ್ರತೆ ಒದಗಿಸುವ ವಿಚಾರದಲ್ಲಿ ಮೋದಿ ಸರ್ಕಾರ ಸಂಪೂರ್ಣ ಎಚ್ಚರದಿಂದ ಇದೆ. ಯಾರಿಂದಲೂ ದೇಶದ ಭೂಮಿ ವಶಪಡಿಸಿಕೊಳ್ಳಲಾಗದು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಲಡಾಖ್‌ ಗಡಿ ಪ್ರದೇಶದಲ್ಲಿ ಚೀನಾದೊಂದಿಗೆ ಸಂಘರ್ಷದ ಪರಿಸ್ಥಿತಿ ಮುಂದುವರಿದಿರುವ ಸಂದರ್ಭದಲ್ಲೇ ಶಾ ಈ ಹೇಳಿಕೆ ನೀಡಿದ್ದಾರೆ.

‘ಲಡಾಖ್‌ನಲ್ಲಿ ಚೀನಾದೊಂದಿಗಿನ ಮುಖಾಮುಖಿ ಕೊನೆಗೊಳಿಸುವ ಸಲುವಾಗಿ ಸೇನಾ ಮಟ್ಟದಲ್ಲಿ ಹಾಗೂ ರಾಜತಾಂತ್ರಿಕ ಕ್ರಮಗಳನ್ನು ಸರ್ಕಾರ ಕೈಗೊಳ್ಳುತ್ತಿದೆ. ನಮ್ಮ ದೇಶದ ಪ್ರತಿ ಇಂಚು ಭೂಮಿಯ ಮೇಲೂ ನಿಗಾ ಇರಿಸಿದ್ದೇವೆ. ದೇಶದ ಗಡಿ ಹಾಗೂ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳುವಲ್ಲಿ ನಮ್ಮ ರಕ್ಷಣಾ ಪಡೆಗಳು ಮತ್ತು ನಾಯಕತ್ವ ಸಮರ್ಥವಾಗಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

ಬಿಹಾರದಲ್ಲಿ ಎನ್‌ಡಿಎಗೆ ಬಹುಮತ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಮೂರನೇ ಎರಡರಷ್ಟು ಬಹುಮತ ದೊರೆಯಲಿದೆ ಎಂದು ಶಾ ಭರವಸೆ ವ್ಯಕ್ತಪಡಿಸಿದ್ದಾರೆ. ನಿತೀಶ್ ಕುಮಾರ್ ಅವರು ಬಿಹಾರದ ಮುಖ್ಯಮಂತ್ರಿಯಾಗಿ ಮತ್ತೊಮ್ಮೆ ಅಧಿಕಾರ ಸ್ವೀಕರಿಸಲಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಲೋಕ ಜನಶಕ್ತಿ ಪಕ್ಷಕ್ಕೆ (ಎಲ್‌ಜೆಪಿ) ಸಾಕಷ್ಟು ಸ್ಥಾನ ನೀಡುವ ಭರವಸೆ ನೀಡಲಾಗಿತ್ತು. ಆದರೂ ಪಕ್ಷವು ಮೈತ್ರಿಕೂಟದಿಂದ ಹೊರನಡೆಯಿತು. ಅದು ಎಲ್‌ಜೆಪಿ ನಿರ್ಧಾರವೇ ಹೊರತು ನಮ್ಮದಲ್ಲ ಎಂದೂ ಶಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.