ನವದೆಹಲಿ: ಐಸಿಐಸಿಐ ಬ್ಯಾಂಕ್ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಮತ್ತು ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್, ಅವರ ಗಂಡ ದೀಪಕ್ ಕೊಚ್ಚರ್ ಮತ್ತು ವಿಡಿಯೊಕಾನ್ ಸಮೂಹದ ವ್ಯವಸ್ಥಾಪಕ ನಿರ್ದೇಶಕ ವೇಣುಗೋಪಾಲ್ ದೂತ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.
ಬ್ಯಾಂಕ್ನ ಕೆಲವು ಹಿರಿಯ ಅಧಿಕಾರಿಗಳ ಮೇಲೆಯೂ ನಿಗಾ ಇರಿಸಲಾಗಿದೆ. ಬ್ಯಾಂಕ್ನ ಈಗಿನ ಸಿಇಒ ಸಂದೀಪ್ ಬಕ್ಷಿ, ಸಾಲ ಮಂಜೂರಾತಿ ಸಮಿತಿಯಲ್ಲಿ ಇದ್ದ ಸಂಜಯ್ ಚಟರ್ಜಿ, ಝರೀನ್ ದಾರೂವಾಲಾ, ರಾಜೀವ್ ಸಬರ್ವಾಲ್, ಕೆ.ವಿ. ಕಾಮತ್ ಮತ್ತು ಹೋಮಿ ಖುಸ್ರೊಖಾನ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ವಿಡಿಯೊಕಾನ್ ಕಂಪನಿಯ ಮುಂಬೈ ಮತ್ತು ಔರಂಗಾಬಾದ್ ಕಚೇರಿಗಳು, ದೀಪಕ್ ಕೊಚ್ಚರ್ ಅವರ ನ್ಯೂಪವರ್ ರಿನೀವೆಬಲ್ಸ್ ಪ್ರೈ.ಲಿ.ನ ಕಚೇರಿಗಳಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ವೇಣುಗೋಪಾಲ್ ಮತ್ತು ದೀಪಕ್ ಕೊಚ್ಚರ್ ವಿರುದ್ಧ ಪ್ರಾಥಮಿಕ ತನಿಖೆಗಾಗಿ ಸಿಬಿಐ ಹತ್ತು ತಿಂಗಳ ಹಿಂದೆ ಪ್ರಕರಣ ದಾಖಲಿಸಿಕೊಂಡಿತ್ತು. ₹3,250 ಕೋಟಿ ಸಾಲ ಮಂಜೂರಾತಿಯಲ್ಲಿ ಅಕ್ರಮ ಆಗಿರಬಹುದು ಎಂಬ ನೆಲೆಯಲ್ಲಿ ತನಿಖೆ ನಡೆಸಲಾಗಿತ್ತು.
ಪ್ರತಿಫಲ?
ದೂತ್ ಅವರು ಸ್ಥಾಪಿಸಿದ ಸುಪ್ರೀಂ ಎನರ್ಜಿ ಲಿ. ಮೂಲಕ ದೀಪಕ್ ಕೊಚ್ಚರ್ ಅವರ ನ್ಯೂಪವರ್ ರಿನೀವೆಬಲ್ಸ್ ಲಿ.ಗೆ ₹64 ಕೋಟಿ ವರ್ಗಾಯಿಸಲಾಗಿದೆ. ಇದು ಐಸಿಐಸಿಐ ಬ್ಯಾಂಕ್ನಿಂದ ಅಕ್ರಮವಾಗಿ ಸಾಲ ಮಂಜೂರು ಮಾಡಿದ್ದಕ್ಕೆ ಕೊಟ್ಟ ಪ್ರತಿಫಲ ಎಂದು ಸಿಬಿಐ ಆರೋಪಿಸಿದೆ.
ಸಿಬಿಐ ಮಾಡಿದ ಆರೋಪಗಳೇನು
* ವಿಡಿಯೊಕಾನ್ ಸಮೂಹಕ್ಕೆ ನೀಡಿದ ₹1,875 ಕೋಟಿ ಮೊತ್ತದ ಆರು ಸಾಲ ನೀಡಿಕೆಯಲ್ಲಿ ಅಕ್ರಮ
* ₹300 ಕೋಟಿ, ₹750 ಕೋಟಿ ಸಾಲ ಮಂಜೂರಾತಿ ಸಮಿತಿಯಲ್ಲಿ ಚಂದಾ ಕೊಚ್ಚರ್ ಇದ್ದರು
* ಹೆಚ್ಚಿನ ಸಾಲಗಳು ಈಗ ಸುಸ್ತಿ ಸಾಲಗಳಾಗಿ ಉಳಿದಿವೆ, ಬ್ಯಾಂಕ್ಗೆ ₹1,730 ಕೋಟಿ ನಷ್ಟವಾಗಿದೆ
* ಆರೋಪಿಗಳು ಅಪರಾಧ ಒಳಸಂಚು ನಡೆಸಿ ಐಸಿಐಸಿಐ ಬ್ಯಾಂಕ್ಗೆ ವಂಚಿಸುವ ಉದ್ದೇಶದಿಂದಖಾಸಗಿ ಕಂಪನಿಗೆ ಸಾಲ ಮಂಜೂರು ಮಾಡಿದ್ದಾರೆ
–ಸಿಬಿಐ ವಕ್ತಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.