ನವದೆಹಲಿ: ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷರ ರಾಹುಲ್ ಗಾಂಧಿ ಅವರನ್ನು ದೆಹಲಿಯಲ್ಲಿ ಶನಿವಾರ ಭೇಟಿ ಮಾಡಿದ್ದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಭಾನುವಾರ ಮತ್ತೊಮ್ಮೆ ಭೇಟಿ ಮಾಡಿದ್ದಾರೆ.
ದೆಹಲಿಯ ರಾಹುಲ್ ನಿವಾಸದಲ್ಲಿ ಭೇಟಿಯಾದ ಚಂದ್ರಬಾಬು ನಾಯ್ಡು ಅವರು ಇದಕ್ಕೂ ಮೊದಲು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನೂ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇವರಷ್ಟೇ ಅಲ್ಲದೆ, ಎಡರಂಗದ ಪ್ರಮುಖರಾದ ಸಿಪಿಐಎಂನ ಸೀತಾರಾಂ ಯೆಚೂರಿ ಅವರನ್ನೂ ಭೇಟಿಯಾಗಿದ್ದ ನಾಯ್ಡು, ಸಿಪಿಐ ನಾಯಕ ಸುಧಾಕರ ರೆಡ್ಡಿ, ಡಿ.ರಾಜಾ ಅವರನ್ನೂ ದೆಹಲಿಯಲ್ಲಿ ಸಂಧಿಸಿ ಮಾತುಕತೆ ನಡೆಸಲಿದ್ದಾರೆ.
ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚಿಸುವ ನಿಟ್ಟಿನಲ್ಲಿ ಚಂದ್ರಬಾಬು ನಾಯ್ಡು ಅವರು ವಿರೋಧ ಪಕ್ಷಗಳನ್ನು ಸಂಘಟಿಸು ಕಾರ್ಯದಲ್ಲಿ ತೊಡಗಿದ್ದಾರೆ ಎಂದುಹೇಳಲಾಗುತ್ತಿದೆ.
ಒಂದು ವೇಳೆ ಎನ್ಡಿಎ ಮೈತ್ರಿ ಕೂಟಕ್ಕೆ ಬಹುಮತ ಬಾರದೇ ಹೋದಲ್ಲಿ, ಬಿಜೆಪಿಯೇತರ ಸರ್ಕಾರ ರಚನೆ ಮಾಡುವ ನಿಟ್ಟಿನಲ್ಲಿ ರೂಪಿಸಬೇಕಾದ ತಂತ್ರಗಳ ಕುರಿತು ಚಂದ್ರಬಾಬು ನಾಯ್ಡು ಅವರು ರಾಹುಲ್ ಜತೆಗಿನ ಶನಿವಾರದ ಭೇಟಿಯಲ್ಲಿ ಸಮಾಲೋಚನೆ ನಡೆಸಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.