ADVERTISEMENT

‘ವೇದಮಂತ್ರ ಪಠಿಸಿದರೆ, ಉತ್ತಮ ಇಳುವರಿ’

ಗೋವಾ ಸರ್ಕಾರದಿಂದ ರೈತರಿಗೆ ಸಲಹೆ

ಪಿಟಿಐ
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST
   

ಪಣಜಿ: ಕೃಷಿಯಲ್ಲಿ ಉತ್ತಮ ಇಳುವರಿ ಬೇಕೆ ? ಹಾಗಿದ್ದರೆ ಕೃಷಿಭೂಮಿಯಲ್ಲಿ ಪುರಾತನ ವೇದ ಮಂತ್ರಗಳನ್ನು ಪಠಿಸಿ! ಎಂದು ಗೋವಾ ಸರ್ಕಾರವು ರಾಜ್ಯದ ರೈತರಿಗೆ ಸಲಹೆ ನೀಡಿದೆ.

ರೈತರು ತಮ್ಮ ಕೃಷಿಭೂಮಿಯಲ್ಲಿ ‘ಬ್ರಹ್ಮಾಂಡ ಕೃಷಿ’ (ಕಾಸ್ಮಿಕ್‌ ಫಾರ್ಮಿಂಗ್‌) ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ.ರೈತರು ತಮ್ಮ ಭೂಮಿಯಲ್ಲೇ ಕನಿಷ್ಠ 20 ದಿನಗಳ ಕಾಲ ವೇದಮಂತ್ರವನ್ನು ಜಪಿಸಿದರೆ,ಗುಣಮಟ್ಟದ ಬೆಳೆ ಹಾಗೂ ಗರಿಷ್ಠ ಇಳುವರಿ ಪಡೆಯಲು ಸಾಧ್ಯ ಎಂದು ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಧಾನದಲ್ಲಿ ಹೆಚ್ಚು ಅನುಭವ ಹೊಂದಿರುವ ಬ್ರಹ್ಮಕುಮಾರಿ ಹಾಗೂ ಶಿವಯೋಗ್‌ ಪೌಂಢೇಶನ್‌ ಸಂಸ್ಥೆಗಳ ಜೊತೆಗೆ ಸರ್ಕಾರ ಮಾತುಕತೆ ನಡೆಸಿದೆ ಎಂದರು.

ADVERTISEMENT

‘ಈ ವಿಧಾನವನ್ನು ಪ್ರಚುರಪಡಿಸುವ ‘ಶಿವಯೋಗ್‌ ಕೃಷಿ’ಯ ಬಗ್ಗೆ ಮಾಹಿತಿ ಪಡೆಯಲು ಗೋವಾ ಕೃಷಿ ಸಚಿವ ವಿಜಯ್‌ ಸರ್ದೇಸಾಯ್‌, ಕೃಷಿ ಇಲಾಖೆ ನಿರ್ದೇಶಕ ನೆಲ್ಸನ್‌ ಫಿಗೈರೆಡೊ ಅವರು ಹರಿಯಾಣದ ಗುರುಗ್ರಾಮದಲ್ಲಿರುವ ಗುರುಶಿವಾನಂದ ಕೇಂದ್ರಕ್ಕೂ ಭೇಟಿ ನೀಡಿದ್ದರು’ ಎಂದು ಅವರು ವಿವರಿಸಿದರು.

‘ಸಾವಯವ ಹಾಗೂ ಪರಿಸರಸ್ನೇಹಿ ಮಾದರಿಗೆ ಒತ್ತುನೀಡಲು ಕೃಷಿ ಇಲಾಖೆ ನಿರ್ಧರಿಸಿದೆ. ಈ ಕಾರಣದಿಂದ ಬ್ರಹ್ಮಾಂಡ ಕೃಷಿ ಹಾಗೂ ಇದೇ ಮಾದರಿಯ ಕೃಷಿ ಮಾದರಿ ಅನುಸರಿಸುತ್ತಿರುವ ಸಂಸ್ಥೆಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ, ಇದರಿಂದ ಗುಣಮಟ್ಟದ ಇಳುವರಿ ಏರಿಕೆಗೂ ಕಾರಣವಾಗಲಿದೆ’ ಎಂದುಇಲಾಖೆ ನಿರ್ದೇಶಕ ನೆಲ್ಸನ್‌ ಫಿಗೈರೆಡೊ ವಿವರಿಸಿದರು.

ಸರ್ಕಾರದ ಪ್ರಕಾರ ರೈತರು ಏನು ಮಾಡಬೇಕು?

ಈ ವಿಧಾನದ ಪ್ರಕಾರ, ರೈತರು ತಮ್ಮ ಕೃಷಿಭೂಮಿಯಲ್ಲಿ 20 ದಿನಗಳ ಕಾಲ 20 ನಿಮಿಷ ವೇದಮಂತ್ರವನ್ನು ಪಠಿಸಬೇಕು. ಮಂತ್ರೋಚ್ಚಾರಣೆಯಿಂದ ಸೃಷ್ಟಿಯಾಗುವ ಶಕ್ತಿಯು, ಕೃಷಿಭೂಮಿಯಲ್ಲಿ ಉತ್ಪಾದನೆಯಾಗಿ, ಗುಣಮಟ್ಟದ ಇಳುವರಿಯನ್ನು ಪಡೆದುಕೊಳ್ಳಬಹುದು ಎಂದುನೆಲ್ಸನ್‌ ಫಿಗೈರೆಡೊ ಅವರು ವಿವರಿಸಿದರು. ಈ ಪದ್ಧತಿ ಅಳವಡಿಕೆಯಿಂದರಾಸಾಯನಿಕ ಹಾಗೂ ಕ್ರಿಮಿನಾಶಕ ಬಳಸುವಂತಿಲ್ಲ, ಇದರಿಂದ ಸಂಪೂರ್ಣ ಸಾವಯವ ಆಹಾರ ದೊರೆಯಲಿದೆ ಎಂದರು.

‘ಈ ವಿಚಾರ ಜಾರಿ ಸಂಬಂಧ, ಗೋವಾ ಸುಸ್ಥಿರ ಕೃಷಿ ಯೋಜನೆಯ ಅಧಿಕಾರಿಗಳು ಬ್ರಹ್ಮಕುಮಾರಿ ಸಂಸ್ಥೆಯ ಗ್ರಾಮೀಣ ಅಭಿವೃದ್ಧಿ ವಿಭಾಗದ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ. ಸುಮಾರು 1 ಸಾವಿರಕ್ಕೂ ಹೆಚ್ಚಿನ ರೈತರು ಈ ವಿಧಾನವನ್ನು ಅಳವಡಿಸಿಕೊಂಡು, ದೊಡ್ಡ ಪ್ರಮಾಣದಲ್ಲಿ ಲಾಭ ಪಡೆದುಕೊಂಡಿದ್ದಾರೆ’ ಎಂದು ಬ್ರಹ್ಮಕುಮಾರಿ ಸಂಸ್ಥೆ ತಿಳಿಸಿದೆ ಎಂದು ಅವರು ತಿಳಿಸಿದರು.

***

‘ಬ್ರಹ್ಮಾಂಡ ಕೃಷಿ’ ಪದ್ಧತಿ ಅಳವಡಿಕೆಯಿಂದ ಖರ್ಚು ಕಡಿಮೆಯಾಗಿ, ಇಳುವರಿ ಹೆಚ್ಚಾಗಲಿದೆ. ಇದರಿಂದ ಪರಿಸರದ ಮೇಲಿನ ಒತ್ತಡವೂ ಕೊನೆಯಾಗಲಿದೆ

–ನೆಲ್ಸನ್‌ ಫಿಗೈರೆಡೊ,ಗೋವಾ ಕೃಷಿ ಇಲಾಖೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.