ADVERTISEMENT

ಕೋವಿಡ್‌ ವಿರುದ್ಧ ಹೋರಾಟ: ಮಂತ್ರ ಪಠಣ, ಪ್ರಾರ್ಥನೆಗೆ ಮೊರೆ ಹೋದ ಗೋವಾ ಜನತೆ

ಪಿಟಿಐ
Published 1 ಆಗಸ್ಟ್ 2020, 6:17 IST
Last Updated 1 ಆಗಸ್ಟ್ 2020, 6:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪಣಜಿ: ಕೋವಿಡ್‌–19ನ ಪ್ರಸರಣವನ್ನು ತಡೆಯಲು ಗೋವಾದ ಕೆಲ ಪ್ರದೇಶಗಳಲ್ಲಿ ಜನರು ದೇವರ ಮೊರೆ ಹೋಗಿದ್ದು, ವಿಶೇಷ ಪ್ರಾರ್ಥನೆ, ಮಂತ್ರ ಪಠಣ ಆರಂಭಿಸಿದ್ದಾರೆ.

ಕೆಲ ತಿಂಗಳು ಹಿಂದೆ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳೇ ವರದಿಯಾಗಿರಲಿಲ್ಲ. ಹೀಗಾಗಿ ರಾಜ್ಯವನ್ನು ಹಸಿರು ವಲಯ ಎಂಬುದಾಗಿಮೇ 1ರಂದು ಘೋಷಿಸಲಾಗಿತ್ತು. ಆದರೆ, ನಂತರದ ದಿನಗಳಲ್ಲಿ ಜನರು ಸೋಂಕು ಪ್ರಸರಣ ಕಂಡು ಬಂತಲ್ಲದೇ, ಶುಕ್ರವಾರ ಕೋವಿಡ್‌ ಪ್ರಕರಣಗಳ ಸಂಖ್ಯೆ 5.900 ತಲುಪಿತ್ತು. ಈ ವರೆಗೆ 45 ಜನರು ಈ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ವತಿಯಿಂದ ದೇವಾಲಯಗಳಲ್ಲಿ ಮಹಾಮೃತ್ಯುಂಜಯ ಮಂತ್ರ ಪಠಣ ಆಯೋಜಿಸಲಾಗಿದೆ. ಕೆಲವೆಡೆ ವಿಶೇಷ ಪ್ರಾರ್ಥನಾ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.

ADVERTISEMENT

‘ರಾಜ್ಯದ ಪ್ರತಿಯೊಂದು ದೇವಾಲಯದಲ್ಲಿ ಮಹಾಮೃತ್ಯುಂಜಯ ಮಂತ್ರವನ್ನು ಲಕ್ಷ ಬಾರಿ ಪಠಿಸಲಾಗುವುದು. ಪೋಂಡಾ ತಾಲ್ಲೂಕಿನ ಧವಳಿ ಗ್ರಾಮದ ವಾಮನೇಶ್ವರ ದೇವಸ್ಥಾನದಲ್ಲಿ ಮಂತ್ರ ಪಠಣಕ್ಕೆ ಚಾಲನೆ ನೀಡಲಾಗಿದೆ’ ಎಂದು ಎಂಜಿಪಿ ಮುಖಂಡ, ಶಾಸಕ ಸುದಿನ್‌ ಧವಳೀಕರ್‌ ಹೇಳಿದರು.

‘ಋಗ್ವೇದದಲ್ಲಿ ಮಹಾಮೃತ್ಯುಂಜಯ ಮಂತ್ರದ ಉಲ್ಲೇಖ ಇದೆ. ನಮ್ಮ ಸುತ್ತಲು ಇರುವ ನಕಾರಾತ್ಮಕ ಶಕ್ತಿ ನಿರ್ಮೂಲನೆ ಮಾಡುವ ಶಕ್ತಿ ಈ ಮಂತ್ರಕ್ಕಿದೆ. ಕೋವಿಡ್‌–19 ಸಹ ಒಂದು ನಕಾರಾತ್ಮಕ ಶಕ್ತಿಯಾಗಿದ್ದು, ಮಾನವ ಕುಲಕ್ಕೆ ಕಂಟಕವಾಗಿ ಪರಿಣಮಿಸಿದೆ’ ಎಂದು ಹೇಳಿದರು.

ದಕ್ಷಿಣ ಗೋವಾದ ಸಾಂಗೆಮ್‌ ತಾಲ್ಲೂಕಿನ ನೇತ್ರಾವಳಿ ಗ್ರಾಮದ ಜನರು ‘ಬೇತಾಳ ಸಾತೇರಿ’ ದೇವಸ್ಥಾನದಲ್ಲಿ ಪ್ರಾರ್ಥನೆ, ವಿಶೇಷ ಪೂಜೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.