ಪದ್ಮಾ
ಚಿತ್ರ ಕೃಪೆ: @KushalSharma_89
ಚಿನ್ನ ಹೆಚ್ಚು ಬೆಲೆ ಬಾಳುವ ವಸ್ತುವಾಗಿದೆ. ಈಗಂತೂ ಚಿನ್ನ ಖರೀದಿಸಲು ವರ್ಷಗಟ್ಟಲೇ ಹಣವನ್ನು ಕೂಡಿಟ್ಟರೂ ಸಾಕಾಗುವುದಿಲ್ಲ. ‘ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ’ ಎಂಬ ಮಾತಿಗೆ ಅರ್ಥ ಕಲ್ಪಿಸುವ ಘಟನೆಯೊಂದು ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ಪೌರಕಾರ್ಮಿಕ ಮಹಿಳೆ ಪದ್ಮಾ ಅವರು ಪ್ರತಿ ದಿನದಂತೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಟಿ.ನಗರದ ಮುಪ್ಪತ್ಮನ್ ದೇವಸ್ಥಾನ ಬೀದಿಯಲ್ಲಿ ಚೀಲವೊಂದು ಕಣ್ಣಿಗೆ ಬಿದ್ದಿದೆ. ಏನೆಂದು ನೋಡಿದ ಪದ್ಮಾ ಅವರಿಗೆ ಆರ್ಶರ್ಯವೇ ಕಾದಿತ್ತು. ಚೀಲದಲ್ಲಿ ಸುಮಾರು ₹45 ಲಕ್ಷ ಮೌಲ್ಯದ 360ಗ್ರಾಂ ತೂಕದ ಚಿನ್ನಾಭರಣಗಳಲ್ಲಿದ್ದವು.
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪದ್ಮಾ ಅವರಿಗೆ ಸನ್ಮಾನ ಮಾಡುತ್ತೀರುವುದು.
ಪದ್ಮಾ ಅವರು ಚೀಲ ತೆಗೆದುಕೊಂಡು ನೇರವಾಗಿ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತಂದು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಚಿನ್ನದ ಮಾಲೀಕರು ಯಾರೆಂದು ಹುಡುಕಾಟವನ್ನು ಆರಂಭಿಸಿದರು. ಈ ಹಿಂದೆ ಚಿನ್ನದ ಆಭರಣವಿರುವ ಚೀಲ ಕಳೆದುಕೊಂಡಿರುವ ಬಗ್ಗೆ ದೂರು ಸಲ್ಲಿಸಿದ್ದ ನಂಗನಲ್ಲೂರಿನ ನಿವಾಸಿ ರಮೇಶ್ ನೆನಪಾದರು. ತಕ್ಷಣ ಅವರನ್ನು ಠಾಣೆಗೆ ಕರೆಸಿ, ಸರಿಯಾದ ಪರಿಶೀಲನೆ ಮತ್ತು ವಿಚಾರಣೆಯ ನಂತರ ಆಭರಣಗಳನ್ನು ಅವರಿಗೆ ಹಿಂದಿರುಗಿಸಿದ್ದಾರೆ.
ಪದ್ಮಾಗೆ ಸನ್ಮಾನ
ಪದ್ಮಾ ಅವರ ಪ್ರಾಮಾಣಿಕತೆಗೆ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೋವಿಡ್ ಸಮಯದಲ್ಲಿ ಪದ್ಮಾ ಅವರ ಪತಿ ಕೂಡ ತಮಗೆ ಸಿಕ್ಕಿದ್ದ ₹1.5 ಲಕ್ಷ ಹಣವನ್ನು ಪೊಲೀಸರಿಗೆ ನೀಡಿದ್ದರು. ಈ ದಂಪತಿ ಇಬ್ಬರು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಇವರ ಪ್ರಮಾಣಿಕತೆಯನ್ನು ಗುರುತಿಸಿದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಸನ್ಮಾನಿಸಿ, ಮೆಚ್ಚುಗೆಯ ಸಂಕೇತವಾಗಿ ₹1 ಲಕ್ಷ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.