ADVERTISEMENT

ಛತ್ತೀಸಗಢ: ದಾಂತೇವಾಡದಲ್ಲಿ 71 ನಕ್ಸಲರು ಶರಣು

ಪಿಟಿಐ
Published 24 ಸೆಪ್ಟೆಂಬರ್ 2025, 12:49 IST
Last Updated 24 ಸೆಪ್ಟೆಂಬರ್ 2025, 12:49 IST
<div class="paragraphs"><p>ನಕ್ಸಲರು</p></div>

ನಕ್ಸಲರು

   

ದಾಂತೇವಾಡ: ತಲೆಗೆ ಒಟ್ಟು ₹64 ಲಕ್ಷ ಬಹುಮಾನ ಘೋಷಿಸಲಾಗಿದ್ದ 30 ಮಂದಿ ಸೇರಿ ಒಟ್ಟು 71 ಮಂದಿ ನಕ್ಸಲರು ಛತ್ತೀಸಗಢದ ದಾಂತೇವಾಡ ಜಿಲ್ಲೆಯಲ್ಲಿ ಬುಧವಾರ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಪೈಕಿ 21 ಮಹಿಳೆಯರೂ ಇದ್ದು, ಮಾವೋವಾದಿ ಸಿದ್ಧಾಂತದಿಂದ ನಿರಾಶೆಗೊಂಡು ಹಿರಿಯ ಪೊಲೀಸ್ ಹಾಗೂ ಸಿಆರ್‌ಪಿಎಫ್‌ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.

ADVERTISEMENT

ಶರಣಾದವರಲ್ಲಿ 17 ವರ್ಷದ ಬಾಲಕ ಹಾಗೂ 16 ಮತ್ತು 17 ವರ್ಷದ ಇಬ್ಬರು ಬಾಲಕಿಯರೂ ಇದ್ದಾರೆ.

ಬಾಸ್ತಾರ್ ವಲಯ ಪೊಲೀಸರ ಪುನರ್ವಸತಿ ಅಭಿಯಾನ ಹಾಗೂ ರಾಜ್ಯ ಸರ್ಕಾರದ ಹೊಸ ಶರಣಾಗತಿ ಹಾಗೂ ಪುನರ್ವಸತಿ ನೀತಿಯಿಂದ ಪ್ರೇರಣೆಗೊಂಡು ಶಸ್ತ್ರ ತ್ಯಜಿಸಿದ್ದಾಗಿ ಅವರು ಹೇಳಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶರಣಾದ ಬಮನ್ ಮಡ್ಕಂ (30) ಹಾಗೂ ಮಂಕಿ ಅಲಿಯಾಸ್ ಶಮಿಲಾ ಮಂಡವಿ (20) ಅವರ ತಲೆಗೆ ತಲಾ ₹ 20 ಲಕ್ಷ, ಶಮಿಲಾ ಅಲಿಯಾಸ್ ಸೋಮ್ಲಿ ಕವಾಸಿ (25), ಗಂಗಿ ಅಲಿಯಾಸ್ ಹೋಹಿಣಿ ಬರ್ಸೆ (25), ದೇವಿ ಅಲಿಯಾಸ್ ಕವಿತಾ ಮಡ್ವಿ (25) ಹಾಗೂ ಸಂತೋಷ್ ಮಂಡ್ವಿ (30) ತಲೆಗೆ ತಲಾ ₹ 5 ಲಕ್ಷ ಬಹುಮಾನ ಘೋಷಿಸಲಾಗಿತ್ತು.

ಉಳಿದವರಲ್ಲಿ ಒಬ್ಬರ ತಲೆಗೆ ₹ 3 ಲಕ್ಷ, ಆರು ಮಂದಿಗೆ ತಲಾ ₹ 2 ಲಕ್ಷ‌, ₹ 9 ಮಂದಿಗೆ ತಲಾ ₹ 1 ಲಕ್ಷ ಹಾಗೂ 6 ಮಂದಿಯ ತಲೆಗೆ ತಲಾ ₹ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿತ್ತು.

ಬಮನ್, ಶಮಿಲಾ, ಗಂಗಿ ಹಾಗೂ ದೇವ್‌ ಮೇಲೆ ಭದ್ರತಾ ಸಿಬ್ಬಂದಿ ಮೇಲೆ ಹಲವು ದಾಳಿಗಳನ್ನು ಮಾಡಿದ ಆರೋಪ ಇದೆ. ಉಳಿದವರು ರಸ್ತೆ ಹಾಳು ಮಾಡುವುದರಲ್ಲಿ, ಮರ ಕಡಿಯುವುದರಲ್ಲಿ, ನಕ್ಸರ್ ಬ್ಯಾನರ್ ಅಳವಡಿಸುವುದರಲ್ಲಿ, ಪೋಸ್ಟರ್ ಹಾಗೂ ಕರಪತ್ರ ಹಂಚುವಲ್ಲಿ ತೊಡಗಿಕೊಂಡಿದ್ದರು.

2020ರ ಜೂನ್ ಬಳಿಕ ತಲೆಗೆ ಬಹುಮಾನ ಘೋಷಣೆಯಾಗಿದ್ದ 297 ಮಂದಿ ಸೇರಿ ಈವರೆಗೆ 1,113 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.