
ರಾಯ್ಪುರ: ಛತ್ತೀಸಗಢ ರಾಜ್ಯವು ಎಡಪಂಥೀಯ ಉಗ್ರವಾದದ ಮೂಲೋತ್ಪಾಟನೆಯ (ನಕ್ಸಲ್) ಅಂಚಿನಲ್ಲಿದೆ ಎಂದು ರಾಜ್ಯಪಾಲ ರಮೆನ್ ಡೆಕಾ ಅವರು ಸೋಮವಾರ ಘೋಷಣೆ ಮಾಡಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಳೆದ ಎರಡು ವರ್ಷಗಳಲ್ಲಿ 532 ನಕ್ಸಲರು ಹತರಾಗಿದ್ದು, 2,700 ನಕ್ಸಲರು ಶರಣಾಗತರಾಗಿದ್ದಾರೆ. 2,004 ಮಂದಿಯನ್ನು ಬಂಧಿಸಲಾಗಿದೆ’ ಎಂದರು.
‘ದಾರಿ ತಪ್ಪಿದ್ದ ಹಲವು ಯುವಕರು ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರದ ಪುನರ್ವಸತಿ ನೀತಿಯು ಪ್ರೇರಣೆ ನೀಡಿದೆ. ಉಗ್ರವಾದದ ಹಿಮ್ಮೆಟ್ಟಿಸುವಿಕೆಯು ಅಭಿವೃದ್ಧಿಯ ಬೆಳಕು ಮೂಡಿಸುತ್ತದೆ’ ಎಂದು ಹೇಳಿದರು.
‘ಬಸ್ತರ್ ಸೇರಿದಂತೆ ನಕ್ಸಲ್ ಪ್ರಭಾವ ಇದ್ದ ಪ್ರದೇಶಗಳಲ್ಲಿ ಮೂಲಸೌಕರ್ಯ ಯೋಜನೆಗಳನ್ನು ಸರ್ಕಾರ ಕಾರ್ಯಗತಗೊಳಿಸಿದೆ. ಹಳ್ಳಿಗಳು ಅಭಿವೃದ್ಧಿ ಕಾಣುತ್ತಿವೆ. ಶಿಕ್ಷಣ ಮತ್ತು ಆರೋಗ್ಯ ಸೌಕರ್ಯಕ್ಕೂ ಆದ್ಯತೆ ಸಿಕ್ಕಿದೆ’ ಎಂದು ಭಾಷಣದಲ್ಲಿ ಸರ್ಕಾರದ ಯೋಜನೆಗಳನ್ನು ಉಲ್ಲೇಖ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.